ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡೋಕೆ ಆಗಲ್ಲ ಅಂತ ಅಕೌಂಟ್‍ಗೆ ಹಾಕ್ತಿದ್ದಾರೆ- ರೇವಣ್ಣ ವ್ಯಂಗ್ಯ

ಬೆಂಗಳೂರು: ಚುನಾವಣೆ ಸಮಯದಲ್ಲಿ ಹಣ ಹಂಚಲು ಆಗಲ್ಲ. ಹೀಗಾಗಿ ರೈತರ ನೆಪದಲ್ಲಿ ಅಕೌಂಟ್‍ಗೆ ದುಡ್ಡು ಜಮೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ದೇಶದ ಜನರು 5 ವರ್ಷ ಕಾದಿರುವುದಕ್ಕೆ 6 ಸಾವಿರ ರೂ. ಬೋನಸ್ ನೀಡಿದ್ದಾರೆ. ಹೀಗಾಗಿ ಅವರ ಅಧಿಕಾರ ಅವಧಿಯ ಮುಕ್ತಾಯವಾಗಲು 4 ತಿಂಗಳು ಬಾಕಿ ಇದ್ದು, 2 ಸಾವಿರ ರೂ. ನಂತೆ ಪಾವತಿ ಮಾಡುತ್ತಾರೆ ಅಷ್ಟೇ ಎಂದು ಕುಟುಕಿದರು.

ನಮ್ಮ ನಿರೀಕ್ಷೆಯಂತೆ ಬಜೆಟ್ ಮಂಡನೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಂಡಿದ್ದೇವು. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 10 ಸಾವಿರ ರೂ. ಹಾಕುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಹಾಗೆ ಮಾಡಲಿಲ್ಲ ಎಂದ ಅವರು, ಚುನಾವಣೆ ಸಮಯದಲ್ಲಿ ಹಣ ಹಂಚಲು ಹೋದರೆ ಚುನಾವಣಾ ಆಯೋಗ ಬಿಡಲ್ಲ. ಅದಕ್ಕೆ ಸಣ್ಣ ಹಿಡುವಳಿದಾರರ ರೈತರ ಬ್ಯಾಂಕ್‍ಗೆ ಹಣ ಹಾಕುವ ಪ್ಲಾನ್ ಮಾಡಿದ್ದಾರೆ ಎಂದು ಕಾಲೆಳೆದರು.

ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಪಕ್ಷದ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ. ಹಾಸನದಲ್ಲಿ ತ್ರೀಕೋನ ಸ್ಪರ್ಧೆಗೂ ನಾವು ಸಿದ್ಧರಿದ್ದೇವೆ ಹಾಗೂ ಕಾಂಗ್ರೆಸ್ ಜತೆ ಹೊಂದಾಣಿಕೆಗೂ ರೆಡಿ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *