ಸೋಲಿನಿಂದ ಯಾರೂ ಕೆಂಗೆಟ್ಟಿಲ್ಲ, ಎಚ್‍ಡಿಡಿ ಫಿನಿಕ್ಸ್‌ನಂತೆ ಎದ್ದು ಬರ್ತಾರೆ: ಜಿಟಿಡಿ

ಬೆಂಗಳೂರು: ಲೋಕಸಭಾ ಚುನಾವಣಾ ಸೋಲಿನಿಂದ ಯಾರೂ ಕೆಂಗೆಟ್ಟಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಫಿನಿಕ್ಸ್‌ನಂತೆ ಎದ್ದು ಬರುತ್ತಾರೆ ಎಂದು ಅಂತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು, ಚುನಾವಣೆಯಲ್ಲಿ ಸೋತವನು ನಾನು. ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಎಚ್.ಡಿ.ದೇವೇಗೌಡ ಅವರು ಚಾಲೆಂಜ್ ಮಾಡಿದ್ದಾರೆ. ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ. ನಿನ್ನೆಯ ಸಭೆಯಲ್ಲಿ ದೇವೇಗೌಡರು ಇದನ್ನೇ ಹೇಳಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಕೂಡಾ ರಾಜೀನಾಮೆ ಕೊಡಲ್ಲ. ಈ ಸಂಬಂಧ ದೇವೇಗೌಡರು ಪ್ರಜ್ವಲ್ ಅವರ ಜೊತೆ ಮಾತನಾಡಿದ್ದಾರೆ. ನನ್ನ ಆಶೀರ್ವಾದದಿಂದ ಗೆದ್ದಿದ್ದೀಯ. ನೀನು ಕ್ಷೇತ್ರ ಅಭಿವೃದ್ಧಿ ಮಾಡಬೇಕು ಅಂತ ಸಲಹೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದರು.

ನಿಖಿಲ್ ಕುಮಾರಸ್ವಾಮಿ ಅವರು ಕೂಡ ಯಾವುದೇ ನೋವಿನಲ್ಲಿ ಇಲ್ಲ. ಸೋತರೂ ಉತ್ಸಾಹದಿಂದ ನಮ್ಮ ಜೊತೆ ಮಾತಾಡುತ್ತಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಅಂತ ತಿಳಿದು ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಜನರೇ ತೀರ್ಪೇ ಅಂತಿಮ. ಸೋಲು ನಾವು ಒಪ್ಪಿಕೊಂಡಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದೇವೆ. ಸೋಲಿನಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಸರ್ಕಾರ ಶೇ. 100 ಸೇಫ್ ಆಗಿದೆ. ಸರ್ಕಾರಕ್ಕೆ ಏನು ತೊಂದರೆ ಇಲ್ಲ. ಈ ಸೋಲು ಎಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ. ಜನರು ಉತ್ತಮ ಸರ್ಕಾರ ನಡೆಸಲು ನಮಗೆ ಚಾಟಿ ಏಟು ನೀಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ನಾಲ್ಕು ವರ್ಷ ಕೆಲಸ ಮಾಡಬೇಕು ಎಂದು ಮೈತ್ರಿ ನಾಯಕರಿಗೆ ಕಿವಿ ಮಾತು ಹೇಳಿದರು.

Comments

Leave a Reply

Your email address will not be published. Required fields are marked *