ಯಾವ ಕಾರಣಕ್ಕೂ ನಾನು ಡಿಸಿಎಂ ಆಗಲ್ಲ: ಸಚಿವ ಈಶ್ವರಪ್ಪ

ಶಿವಮೊಗ್ಗ: ಸಂಕ್ರಾತಿ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಬೆನ್ನಲ್ಲೇ ನಾಯಕರು ಈ ಕುರಿತು ತಮ್ಮ ಅಭಿಪ್ರಾಯ, ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಡಿಸಿಎಂ ಆಗುವುದಿಲ್ಲ. ಈಗಾಗಲೇ ಮೂವರು ಡಿಸಿಎಂ ಆಗಿದ್ದಾರೆ. ಡಿಸಿಎಂ ಆಗಬೇಕು ಎನ್ನುವ ಆಕಾಂಕ್ಷಿಗಳು ಇನ್ನೂ ಇದ್ದಾರೆ. ಹೀಗಿರುವಾಗ ಡಿಸಿಎಂ ಆಗಲು ಹೇಗೆ ಸಾಧ್ಯ, ಹೀಗಾಗಿ ನಾನು ಆಕಾಂಕ್ಷಿಯಲ್ಲ. ಈ ಬಗ್ಗೆ ಆಸೆ ಪಡುವುದೇ ತಪ್ಪು ಎಂದು ಸ್ಪಷ್ಟಪಡಿಸಿದರು.

ಈಗಿರುವ ಡಿಸಿಎಂ ಹುದ್ದೆಯನ್ನು ತೆಗೆಯುತ್ತಾರೆ ಎಂಬ ಚರ್ಚೆ ಸಹ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಭಾರತ್ ಬಂದ್ ರಾಜಕೀಯ ಕುತಂತ್ರ:
ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿರುವ ಭಾರತ್ ಬಂದ್ ಸಂಪೂರ್ಣ ರಾಜಕೀಯ ಕುತಂತ್ರ. ಒಂದು ಕಡೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಸಿಎಎ ಸೇರಿದಂತೆ ಕೇಂದ್ರ ಸರಕಾರದ ಇತರ ಮಸೂದೆ ಹಾಗೂ ಕಾಯ್ದೆಗಳಿಗೆ ವಿರೋಧ ಮಾಡುತ್ತಿದ್ದಾರೆ ಎಂದರು.

ಈ ಬಂದ್ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕುತಂತ್ರವಾಗಿದೆ ಅಷ್ಟೇ. ದೇಶದ ಜನ ಕುತಂತ್ರವನ್ನು ಒಪ್ಪುವುದಿಲ್ಲ. ಹೀಗಾಗಿ ಇಂದಿನ ಭಾರತ್ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Comments

Leave a Reply

Your email address will not be published. Required fields are marked *