ಹಂಪಿ ಉತ್ಸವ ಆಚರಣೆ ಸಂಬಂಧ ಸಚಿವ ಡಿಕೆಶಿ ಎಚ್ಚರಿಕೆ

ಬೆಂಗಳೂರು: ಹಂಪಿ ಉತ್ಸವ ಆಚರಣೆ ಕುರಿತು ಯಾರು ರಾಜಕೀಯ ಮಾಡಬಾರದು ಅಂತ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿ ಉತ್ಸವ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ವರದಿ ನೀಡಿದ ಬಳಿಕ ಉತ್ಸವದ ಬಗ್ಗೆ ನಿರ್ಧಾರ ಮಾಡ್ತೀವಿ ಅಂದ್ರು.

ಆ ಭಾಗದಲ್ಲಿ ಹೆಚ್ಚು ಬರಗಾಲವಿದೆ. ಜನರ ಹಿತ ನಮಗೆ ಮುಖ್ಯ. ಉತ್ಸವ ಮಾಡಲು ಒಂದೆರಡು ದಿನ ಸಿದ್ಧತೆ ನಮಗೆ ಸಾಕಾಗೊಲ್ಲ. ಹೀಗಾಗಿ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಇದೇ ವೇಳೆ ಭಿಕ್ಷೆ ಎತ್ತಿ ಉತ್ಸವ ಮಾಡ್ತೀನಿ ಅಂದವರಿಗೆ ಟಾಂಗ್ ನೀಡಿದ ಅವರು, ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ರಾಜಕಾರಣ ಮಾಡೋರಿಗೆ ಈಗಾಗಲೇ ಅನೇಕ ಸಾರಿ ಉತ್ತರ ಸಿಕ್ಕಿದೆ ಎಂದು ಮಾಜಿ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದರು.

ಸೋಲಿನ ಭಯಕ್ಕೆ ಬಂಧನ!
ಚಂದ್ರಶೇಖರ್ ರಾವ್ ಸೋಲಿನ ಭಯದಲ್ಲಿ ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿಯನ್ನ ಬಂಧಿಸಿದ್ದಾರೆ ಅಂತ ಸಚಿವ ತೆಲಂಗಾಣ ಉಸ್ತುವಾರಿ ಡಿಕೆಶಿವಕುಮಾರ್ ಆರೋಪಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ರೇವಂತ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಮನೆ ಬಾಗಿಲು, ಬೆಡ್ ರೂಂ ಒಡೆದು ಹಾಕಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಂದ್ರಶೇಖರ್ ರಾವ್ ಸೋಲಿನ ಭೀತಿಯಿಂದಾಗಿ ಹೀಗೆ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಚಂದ್ರಶೇಖರ್ ರಾವ್ ಮಾಡಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ ಅಂದ್ರು.

ಘಟನೆ ಕುರಿತು ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡ್ತೀವಿ. ಚಂದ್ರಶೇಖರ್ ರಾವ್ ಗೆ ಸೋಲಿನ ಭೀತಿಯಿಂದ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ತೆಲಂಗಾಣ ಜನರಿಗೆ ಚಂದ್ರಶೇಖರ್ ರಾವ್ ದ್ರೋಹ ಮಾಡಿದ್ದಾರೆ ಅಂತ ಗುಡುಗಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆಲ್ಲುತ್ತೆ. ಸಂಪೂರ್ಣ ಬಹುಮತ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬರುತ್ತೆ ಅಂತ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *