ದೋಸ್ತಿ ಸರ್ಕಾರವನ್ನು ಕಿತ್ತು ಹಾಕೋದು ಕಡ್ಲೆ ಗಿಡದಷ್ಟು ಸುಲಭವಲ್ಲ- ಡಿಕೆಶಿ

ಹುಬ್ಬಳ್ಳಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡರು ನೆಟ್ಟಂತಹ ಮಹಾ ಕಲ್ಪವೃಕ್ಷವೇ ಮೈತ್ರಿ ಸರ್ಕಾರ. ಈ ದೋಸ್ತಿ ಸರ್ಕಾರವನ್ನು ಕಿತ್ತು ಹಾಕುವುದು ಕಡ್ಲೆ ಗಿಡದಷ್ಟು ಸುಲಭವಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕುಂದಗೋಳ ತಾಲೂಕಿನ ವರೂರು ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುತ್ತಂತೆ. ನಾವೇನೂ ಕಡ್ಲೇ ಕಾಯಿ ತಿಂತಿದ್ದೀವಾ ಎಂದು ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.

ಕುಸುಮಾ ಶಿವಳ್ಳಿ ಅವರು ಅರ್ಜಿ ಹಾಕಿ ಟಿಕೆಟ್ ಪಡೆದಿಲ್ಲ. ನನ್ನ ಬೆನ್ನಿಗೆ ಕಟ್ಟಿಕೊಂಡು ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸುತ್ತೇನೆ. ಇದು ನನ್ನದೇ ಚುನಾವಣೆ ಇದ್ದಂತೆ. ತಮ್ಮನ ರೀತಿಯಲ್ಲಿ ನಿಂತು ಚುನಾವಣೆ ಎದುರಿಸುತ್ತೇನೆ. ಯುವಜನತೆಗೆ, ಬಡವರಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ. ನಾವು ಒಂದು ಕೋಮು ಗಲಭೆ ಆಗದಂತೆ ಆಡಳಿತ ಮಾಡುತ್ತಾ ಬಂದಿದ್ದೇವೆ ಅಂದರು.

ಕುಸುಮಾ ಶಿವಳ್ಳಿ ಅವರು ಗೆದ್ದರೆ ನಾನೂ ಮೂರ್ನಾಲ್ಕು ತಿಂಗಳು ಇಲ್ಲೇ ಇರುತ್ತೇನೆ. ಅವರ ಬಾಕಿ ಉಳಿದ ಕೆಲಸಗಳನ್ನ ಪೂರ್ತಿಗೊಳಿಸುತ್ತೇನೆ. ಕುಸುಮಕ್ಕನ ಜೊತೆ ನಿಂತುಕೊಂಡು ಶಿವಳ್ಳಿಯವರ ಎಲ್ಲ ಕನಸನ್ನ ಸಾಕಾರಗೊಳಿಸುತ್ತೇನೆ. ಶಿವಳ್ಳಿ ಯಾರಿಗೂ ತೊಂದರೆ ಕೊಡದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಇಲ್ಲಿ ಗೆದ್ದರೆ ಯಡಿಯೂರಪ್ಪ ಸಿಎಂ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವೇನು ಕಡ್ಲೆ ಕಾಯಿ ತಿಂತಿದ್ದೀವಾ ಎಂದು ಕಿಡಿಕಾರಿದರು.

ಡಿ.ಕೆ ಸುರೇಶ್ ಕೂಡ ಇಲ್ಲಿ ತಮ್ಮ ಸೇವೆ ಮಾಡಲು ಬಂದಿದ್ದಾರೆ. ನೀವು ಯಾರಿಗೆ ಹೆದರಬೆಕಾಗಿಲ್ಲ. ನೀವುಂಟು ಸರ್ಕಾರ ಉಂಟು. ಒಂದು ನಂಬರ್ ಬಟನ್ ಒತ್ತಿದರೆ ಮೋದಿ, ಯಡಿಯೂರಪ್ಪಗೆ ಕೇಳಿಸಬೇಕು. ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್, ಜೋಶಿ ನಮಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಗರಂ ಆದರು.

ಇದೇ ವೇಳೆ ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದನ್ನ ಚುನಾವಣೆ ಸಲುವಾಗಿ ಬಳಸಿಕೊಳ್ಳುತ್ತಿರೋದು ಬೇಸರದ ಸಂಗತಿಯಾಗಿದೆ. 23ಕ್ಕೆ ಮೋದಿ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ ಸರ್ಕಾರ ಇರುತ್ತದೆ. ಯಡಿಯೂರಪ್ಪನ ರಾಜಕೀಯ ದಿನಗಳು ಕೊನೆಗೊಳ್ಳುತ್ತಿದೆ. ಬಿಜೆಪಿ ಸ್ಥಳೀಯ ನಾಯಕರ ಪಾಲಿಗೆ ಕಾಂಗ್ರೆಸ್ ಬಾಗಿಲು ಯಾವತ್ತೂ ತೆಗೆದಿರುತ್ತದೆ. ಅಧಿಕಾರ ಇದ್ದಾಗ ಬಿ.ಎಸ್ ಯಡಿಯೂರಪ್ಪ ಏನೂ ಮಾಡಿಲ್ಲ. ಈಗ ಏನೂ ಹರಿತೀನಿ, ಹರೀತೀನಿ ಅಂದರೆ ಏನೂ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *