ಸಚಿವ ಡಿಕೆ ಶಿವಕುಮಾರ್‌ಗೆ ಶೋಕಾಸ್ ನೋಟಿಸ್ ಜಾರಿ ಸಾಧ್ಯತೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಟ್ರಬಲ್ ಶೂಟರ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಶೋಕಾಸ್ ನೋಟಿಸ್ ಜಾರಿ ಮಾಡಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಡಿ.ಕೆ.ಶಿವಕುಮಾರ್ ಅವರು ಬೇರೆಯವರ ಹೆಸರಿನಲ್ಲಿ 36 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಪ್ರಕಣದ ಕುರಿತು ವಿಚಾರಣೆ ನಡೆಸುವ ಉದ್ದೇಶದಿಂದ ಐಟಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಲಿದ್ದಾರೆ. ಶೋಕಾಸ್ ನೋಟಿಸ್ ಜಾರಿಯಾದರೆ ಸಚಿವರು ನವದೆಹಲಿಯ ಆದಾಯ ತೆರಿಗೆ ಇಲಾಖೆ ಕೇಂದ್ರ ಕಚೇರಿಗೆ ಬಂದು ಉತ್ತರ ನೀಡಬೇಕಾಗುತ್ತದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ?

ಏನಿದು ಪ್ರಕರಣ?:
ಐಟಿ ಅಧಿಕಾರಿಗಳು 2017 ಆಗಸ್ಟ್ 1ರಂದು ಸಚಿವ ಡಿಕೆ ಶಿವಕುಮಾರ್ ಆಪ್ತರು, ಸಂಬಂಧಿಕರು, ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಚೆನ್ನೈ, ದೆಹಲಿ, ಬೆಂಗಳೂರು, ಮೈಸೂರು, ಕನಕಪುರದ 60 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಚೆನ್ನೈ ಮೂಲದ ಎಲ್‍ಇಡಿ ಕಂಪನಿಯೊಂದರಲ್ಲಿ ಡಿಕೆಶಿ ಪಾಲುದಾರಿಕೆ ಇರುವ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆ ಕಂಪನಿಯನ್ನೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಸಚಿವರು 36 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

ಈ ಸಂಬಂಧ 2017 ನವೆಂಬರ್ 6ರಂದು ಸಚಿವರ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಉತ್ತರಿಸಿದ್ದರು. ಈ ವೇಳೆ ಸರಿಯಾದ ಉತ್ತರ ಸಿಗದೇ ಇದ್ದ ಕಾರಣ ವಿಚಾರಣೆ ಮುಂದುವರಿದಿತ್ತು. ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆ ಶಿವಕುಮಾರಸ್ ಅವರ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ.ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಜನವರಿ 2ರಂದು ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಬಳಿಕ ತಾಯಿ ಗೌರಮ್ಮ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ಉತ್ತರ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *