ಕನಕಪುರದಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಡಿಕೆಶಿಯಿಂದ ಪಾಠ ಕಲಿಬೇಕಿಲ್ಲ: ಸಿ.ಟಿ ರವಿ

ಬೆಂಗಳೂರು: ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಜಾಪ್ರಭುತ್ವ ನಾಶ ಆಗುತ್ತಿದೆ ಅನ್ನೋ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ಡಿಕೆಶಿಯಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ ಅಂತ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಸಿಟಿ ರವಿ, ಕನಕಪುರದಲ್ಲಿ ಪ್ರಜಾಪ್ರಭುತ್ವ ಇದೆಯಾ? ಕನಕಪುರದಲ್ಲಿ ಪ್ರಜಾಪ್ರಭುತ್ವ ಹೋಗಿ ತುಂಬಾ ದಿನ ಆಗಿದೆ. ಕನಕಪುರದಲ್ಲಿ ಇರೋರು ಸರ್ವಾಧಿಕಾರಿ ಧೋರಣೆ. ಹಣದ ಮದದ ಧೋರಣೆ ಅಂತ ವಾಗ್ದಾಳಿ ನಡೆಸಿದರು.

ಅಷ್ಟಕ್ಕೆ ಸುಮ್ಮನಾಗದ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದರು. ಕಾಂಗ್ರೆಸ್ಸಿನಲ್ಲೂ ಪ್ರಜಾಪ್ರಭುತ್ವ ಇಲ್ಲ. ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಬಂದಿರೋ ಪಕ್ಷ. ಕಾಂಗ್ರೆಸ್ಸಿನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಸೋನಿಯಾ, ರಾಹುಲ್ ಎಷ್ಟು ವರ್ಷದಿಂದ ಅಧ್ಯಕ್ಷರಾಗಿದ್ದಾರೆ. ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲದವರು ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ. ಮೊದಲು ಅವರ ಪಕ್ಷದಲ್ಲಿ ಪ್ರಜಾಪ್ರಭುತ್ವ ಜಾರಿಗೆ ತರಲಿ ಅಂತ ಆಕ್ರೋಶ ಹೊರ ಹಾಕಿದರು.

ತುರ್ತು ಪರಿಸ್ಥಿತಿ ತಂದ ಪಕ್ಷದಿಂದ ಪ್ರಜಾಪ್ರಭುತ್ವ ನಾವು ಕಲಿಯಬೇಕಾಗಿಲ್ಲ. ನಮ್ಮ ಕೇಂದ್ರ ಸರ್ಕಾರ ಜನರಿಂದ ಆಯ್ಕೆಯಾದ ಸರ್ಕಾರ. ಹೇರಲ್ಪಟ್ಟ ಸರ್ಕಾರದ ನಮ್ಮದಲ್ಲ. ತುರ್ತು ಸ್ಥಿತಿ ಹೇರಿದ ಪಕ್ಷದಲ್ಲಿ ಇದ್ದು ಮಾತಾಡೋ ನೈತಿಕತೆ ಅವರಿಗೆ ಇಲ್ಲ ಅಂತ ಗರಂ ಆದರು.

ಜನರಿಂದ ಆಯ್ಕೆಯಾದ ಸರ್ಕಾರ ಮಾಡಿದ ಕಾಯ್ದೆ ವಿರುದ್ಧ ಬೀದಿಯಲ್ಲಿ ಹೋರಾಟ ಮಾಡೋದು ಸರಿಯಾ? ಕಾಯ್ದೆ ಆಗೋದು ಬೀದಿಯಲ್ಲ ಅಥವಾ ಸಂಸತ್ ನಲ್ಲಾ? ಕಾಂಗ್ರೆಸ್ ಕಾಯ್ದೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುತ್ತಿದೆ. ಮುಸ್ಲಿಮರಿಗೆ ತೊಂದರೆ ಆಗುತ್ತೆ ಅಂತ ಸುಮ್ಮನೆ ಮಾತಾಡುತ್ತಿದ್ದಾರೆ. ಮುಸಲೋನಿ ಆಡಳಿತ ಇಟ್ಟುಕೊಂಡು ಗೋಬೆಲ್ ತಂತ್ರ ಅನುಸರಿಸಿ ಅಧಿಕಾರ ಮಾಡಬಹುದು ಅಂತ ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ. ನಿಮ್ಮಿಂದ ನಾವು ಪಾಠ ಕಲಿಬೇಕಾಗಿಲ್ಲ. ಮೊದಲು ಕಾಂಗ್ರೆಸ್ ಸಮಾನತೆಗೆ ಬೆಂಬಲ ಕೊಡಲಿ ಅಂತ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *