ಸಿದ್ದರಾಮಯ್ಯ ಆ್ಯಕ್ಷನ್ ಪ್ಲಾನ್‍ನಿಂದ ‘ಕನಕಪುರ ಬಂಡೆ’ ಕಂಬಿ ಎಣಿಸುತ್ತಿದ್ದಾರೆ: ಶ್ರೀರಾಮುಲು

– ಜನರ ಅಭಿಪ್ರಾಯದಂತೆ ನಾನು ಸಿಎಂ ಆಗೋಕೆ ಆಗುತ್ತಾ?
– ಖಾತೆ ಹಂಚಿಕೆಯಲ್ಲಿ ಅಸಮಾಧಾನವಿಲ್ಲ

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆ್ಯಕ್ಷನ್ ಪ್ಲಾನ್‍ ನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋದರು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು, ಸಿದ್ದಾರಾಮಯ್ಯ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ಹೊಂದಿಕೆ ಯಾವತ್ತೂ ಸಾಧ್ಯವಿಲ್ಲ ಅಂತ ಈ ಹಿಂದೆಯೇ ಭವಿಷ್ಯ ನುಡಿದಿದ್ದೆ. ಅದು ಈಗ ನಿಜವಾಗಿದೆ. ಸಿದ್ದರಾಮಯ್ಯ ಅವರು 14 ತಿಂಗಳ ನಂತರ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿದರು ಎಂದು ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ತಂದೆ ಎಚ್.ಡಿ.ದೇವೇಗೌಡ ಅವರು ಸೋಲಲು ಸಿದ್ದರಾಮಯ್ಯನವರೇ ಕಾರಣ. ಅಷ್ಟೇ ಅಲ್ಲದೆ ಮಂಡ್ಯದಲ್ಲಿ ಪುತ್ರ ನಿಖಿಲ್ ಸೋಲಿಗೂ ಅವರೇ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದು ಮೊದಲಿನಿಂದಲೂ ಅವರಲ್ಲಿ ಇರುವ ಭಿನ್ನಾಭಿಪ್ರಾಯ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಿ ಬರುವುದಿಲ್ಲ. ಸಮ್ಮಿಶ್ರ ಸರ್ಕಾರ ನಡೆಸುವುದಕ್ಕಾಗಿ ಕೂಡಿದ್ದರು ಅಷ್ಟೇ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು, ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿ ವಿರೋಧ ಪಕ್ಷದ ನಾಯಕರಾಗಬೇಕು ಎನ್ನುವುದು ಸಿದ್ದರಾಮ್ಯಯನವರ ಆ್ಯಕ್ಷನ್ ಪ್ಲಾನ್ ಆಗಿತ್ತು. ಇದೊಂದು ಸಿದ್ದರಾಮಯ್ಯ ಅವರ ದೊಡ್ಡ ಡ್ರಾಮಾ. ಅದರಲ್ಲಿ ಅವರು ಸಕ್ಸಸ್ ಆಗಿದ್ದಾರೆ ಎಂದು ದೂರಿದರು.

ಮನುಷ್ಯನಿಗೆ ತೃಪ್ತಿ ಎನ್ನುವುದು ಇರುವುದಿಲ್ಲ. ಅದು ಇದ್ದರೆ ಇದು ಬೇಕು ಅಂತ ಎನ್ನುತ್ತಾನೆ. ಇರುವ ಜವಾಬ್ದಾರಿಯನ್ನು ಸಂತೃಪ್ತಿಯಿಂದ ನಿರ್ವಹಿಸಬೇಕು. ನಾನು ಮುಖ್ಯಮಂತ್ರಿ ಆಗಬೇಕು ಅಂತ ಜನರು ಹೇಳುತ್ತಾರೆ. ಆಗುವುದಕ್ಕೆ ಸಾಧ್ಯವಾಗುತ್ತಾ? ಈಗ ನಮಗೆ ಬಂದಿರುವುದೇ ಪಂಚಾಮೃತ ಅಂತ ಅಂದುಕೊಂಡು ಮುಂದುವರಿಯಬೇಕು. ನಾನೇನು ಆರೋಗ್ಯ ಖಾತೆಯಲ್ಲಿ ಗೂಟ ಹೊಡೆದುಕೊಂಡು ಕೂರಲ್ಲ. ಈ ಖಾತೆಯಲ್ಲಿ ಇರುವಷ್ಟು ದಿನ ಜನರು ನೆನಪಿಸುವಂತಹ ಕೆಲಸ ಮಾಡುತ್ತೇನೆ.

Comments

Leave a Reply

Your email address will not be published. Required fields are marked *