ರಾತ್ರೋರಾತ್ರಿ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ ಕಾರ್ಮಿಕರು

– ಸ್ವ ಗ್ರಾಮಗಳಿಗೆ ಹೋಗಲು ಅವಕಾಶ ಮಾಡಿಕೊಡುವಂತೆ ಒತ್ತಾಯ

ಗಾಂಧಿನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ನೂರಾರು ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಅಲ್ಲದೇ ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ತಮ್ಮ ಸ್ವಂತ ಊರಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಶುಕ್ರವಾರ ರಾತ್ರಿ ಅನೇಕ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ನೂರಾರು ವಲಸೆ ಕಾರ್ಮಿಕರು ಗುಜರಾತ್‍ನ ಸೂರತ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್ ಆದ ಪರಿಣಾಮದಿಂದ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ಹೋಗಲು ಯಾವುದೇ ವಾಹನವೂ ಸಿಗಲಿಲ್ಲ. ಹೀಗಾಗಿ ಅಂದಿನಿಂದ ಮಾಡಲು ಕೆಲಸವಿಲ್ಲದೆ ಸೂರತ್‍ನಲ್ಲೇ ಸಿಲುಕಿಕೊಂಡಿದ್ದಾರೆ. ಆದ್ದರಿಂದ ತಮ್ಮ ಗ್ರಾಮಕ್ಕೆ ಮರಳಲು ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ ಲಾಕ್‍ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಹಲವಾರು ವಲಸೆ ಕಾರ್ಮಿಕರು ಹತಾಶರಾಗಿ ರಸ್ತೆಗಿಳಿದು ಗುಂಪುಕಟ್ಟಿದ್ದಾರೆ. ನಂತರ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ ಲಾಕ್‍ಡೌನ್ ಆಗಿದ್ದರಿಂದ ಶೀಘ್ರವೇ ತಮ್ಮ ಗ್ರಾಮಗಳಿಗೆ ವಾಪಸ್ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವಾರು ವಲಸೆ ಕಾರ್ಮಿಕರನ್ನು ವಶಕ್ಕೆಪಡೆದಿದ್ದಾರೆ. ಇದುವರೆಗೂ ಗುಜರಾತ್‍ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 378ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *