ಎಲ್‍ಓಸಿ ಬಳಿ ಬಿದ್ದ ಹೆಣ ನಮ್ಮ ಸೇನೆಯದ್ದಲ್ಲ – ಪಾಕಿಸ್ತಾನ

ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಬಳಿ ಮೃತಪಟ್ಟವರು ನಮ್ಮ ಸೈನಿಕರಲ್ಲ ಎಂದು ಪಾಕಿಸ್ತಾನ ತಿಳಿಸಿದೆ.

ಭಾರತೀಯ ಸೇನೆಯಿಂದ ಹತ್ಯೆಗೀಡಾದವರು ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) ಯೋಧರಲ್ಲ. ಪಾಕ್ ಸೇನೆಯ ಯಾವೊಬ್ಬ ಸೈನಿಕ ಗಡಿಯನ್ನು ದಾಟಿ ಹೋಗಿಲ್ಲ. ಕಾಶ್ಮೀರ ವಿಚಾರವನ್ನು ಪ್ರಪಂಚದ ಮುಂದೆ ಬದಲಾಯಿಸಲು ಭಾರತ ಹೂಡಿರುವ ಷಡ್ಯಂತ್ರ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ದಾಳಿಯನ್ನು ಖಂಡಿಸಿ, ಗಡಿನಿಯಂತ್ರಣ ರೇಖೆ ಬಳಿ ಕ್ಲಸ್ಟರ್ ಬಾಂಬ್ ಎಸೆದು ಭಾರತ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಶಾಂತಿ ಮತ್ತು ಭದ್ರತೆಗೆ ಭಾರತದಿಂದ ತೊಂದರೆ ಆಗುತ್ತಿದ್ದು ಕೂಡಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಬಗ್ಗೆ ಗಮನ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್ ನಲ್ಲಿ ಭಾರತದ ಪಾಕಿಸ್ತಾನದ ಸೇನೆಯ ಸಹಾಯದಿಂದ ಉಗ್ರರು ಭಾರತದ ಗಡಿ ನುಸುಳಲು ಪ್ರಯತ್ನ ನಡೆಸುತ್ತಿದ್ದರು. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 5 ರಿಂದ7 ಸೈನಿಕರು ಮತ್ತು ಕೆಲ ಉಗ್ರರು ಸಾವನ್ನಪ್ಪಿದ್ದರು. ದಾಳಿಯಲ್ಲಿ ಬಲಿಯಾದ ಸೈನಿಕರ ಶವ ಭಾರತ ಗಡಿ ಒಳಗಡೆ ಬಿದ್ದಿತ್ತು.

ಉಪಗ್ರಹದ ಮೂಲಕ ಗಡಿ ಪ್ರದೇಶದ ಚಿತ್ರವನ್ನು ಬಿಡುಗಡೆಗೊಳಿಸಿದ ಸೇನೆ, ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವ ಸೈನಿಕರು ಮತ್ತು ಉಗ್ರರ ಮೃತದೇಹಗಳು ಎಲ್‍ಓಸಿಯಲ್ಲಿವೆ. ಶ್ವೇತ ಬಾವುಟ ತೋರಿಸಿ ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗಿ ಅಂತಿಮ ಕ್ರಿಯೆಗಳನ್ನು ನಡೆಸಬಹುದು ಎಂದು ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ವಕ್ತಾರ ರಾಜೇಶ್ ಕಾಲಿಯಾ, ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್ ಬಳಿಯ ಫಾರ್ವರ್ಡ್ ಪೋಸ್ಟ್ ಮೇಲೆ ಬ್ಯಾಟ್ ತಂಡ ನಡೆಸಿದ ದಾಳಿಯನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ. ಸಾವನ್ನಪ್ಪಿರುವವರ ಪೈಕಿ ನಾಲ್ವರು ಪಾಕಿಸ್ತಾನ ಸೇನೆಯ ಸ್ಪೆಷಲ್ ಸರ್ವಿಸ್ ಗ್ರೂಪ್ ಕಮಾಂಡೋಗಳಿರುವ ಶಂಕೆಗಳು ವ್ಯಕ್ತವಾಗಿವೆ. ಭಾರತದ ಶಿಬಿರಗಳತ್ತ ಸಮೀಪಿಸುತ್ತಿದ್ದಂತೆ ಪಾಕಿಸ್ತಾನ ಗುಂಡಿನ ದಾಳಿಯನ್ನು ತೀವ್ರಗೊಳಿಸಿತ್ತು. ದಾಳಿಯ ಪ್ರತಿಯಾಗಿ ಭಾರತ ಸಹ ಪ್ರತಿದಾಳಿ ನಡೆಸಿತ್ತು. ಆದ್ರೆ ದಾಳಿಯಲ್ಲಿ ಬಲಿಯಾಗಿರುವ ಉಗ್ರರ ಶವಗಳನ್ನು ವಶಕ್ಕೆ ಪಡೆದುಕೊಂಡಿಲ್ಲ. ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಪಾಕಿಸ್ತಾನ ಎಲ್‍ಓಸಿಯಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸೈನಿಕರನ್ನು ನೇಮಕಗೊಳಿಸಿದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *