ಉಡುಪಿಯಲ್ಲಿ ಮನಬಂದಂತೆ ಕಲ್ಲೆಸೆದು ಬೀದಿ ರಂಪಾಟ ಮಾಡ್ತಿದ್ದ ಮಾನಸಿಕ ಅಸ್ವಸ್ಥ ಅರೆಸ್ಟ್

ಉಡುಪಿ: ಜಿಲ್ಲೆಯ ಮಲ್ಪೆ, ವಡಭಾಂಡೆಶ್ವರ, ಹೂಡೆ, ಆದಿ ಉಡುಪಿ, ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಮಾನಸಿಕ ರೋಗಿಯೊರ್ವ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಾ, ಸೊತ್ತುಗಳನ್ನು ನಾಶ ಮಾಡುತ್ತ, ಪರಿಸರದಲ್ಲಿ ಭಯ ಪಡಿಸುವ ಚಟುವಟಿಕೆಗಳನ್ನು ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಠಿಸಿದ್ದಾನೆ.

ಸುಮಾರು 30 ವರ್ಷದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಕಾನೂನು ಪ್ರಕ್ರಿಯೆ ನಡೆಸಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾನಸಿಕ ವ್ಯಕ್ತಿಯ ಉಗ್ರ ಪ್ರತಾಪಕ್ಕೆ ಬಹಳಷ್ಟು ಜನ ಹಲ್ಲೆಗೊಳಗಾದ ಪ್ರಕರಣಗಳು ಮಲ್ಪೆ ಪರಿಸರದಲ್ಲಿ ಈ ಹಿಂದೆ ನಡೆದಿವೆ.

ಕಲ್ಲುಗಳನ್ನು ಕಾರಣ ಇಲ್ಲದೆ ಸಾರ್ವಜನಿಕರ ತಲೆಗೆ ಗುರಿಯಿಟ್ಟು ಹೊಡೆಯುತ್ತಿದ್ದನು. ಅಲ್ಲದೇ ಸೋಡಾ ಬಾಟಲಿಗಳನ್ನು ಎಸೆಯುತ್ತಿದ್ದ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರು, ಮಹಿಳೆಯರು, ಶಾಲಾ ಮಕ್ಕಳು ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದರು. ಈತನ ಉಪಟಳ ಎಲ್ಲೆ ಮೀರಿದಾಗ, ಸಾರ್ವಜನಿಕರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಗಮನಕ್ಕೆ ತಂದಿದ್ದಾರೆ.

ಸಾರ್ವಜನಿಕರ ಮನವಿಗೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಮಾನಸಿಕ ವ್ಯಕ್ತಿಯ ರಾದ್ಧಾಂತ ಚಟುವಟಿಕೆಗಳ ವಿಚಾರ ಎಳೆ ಎಳೆಯಾಗಿ ಮನವಿಯಲ್ಲಿ ಉಲ್ಲೇಖಿಸಿ, ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ. ತಿಂಗಳು ಕಾಲ ನೀರಿಕ್ಷಿಸುತ್ತಾ, ಕಾಲ ಕಳೆದರೂ ಜಿಲ್ಲಾಡಳಿತದಿಂದ ಯಾವೊಂದು ಸ್ಪಂದನೆ ಸಿಕ್ಕಿರಲಿಲ್ಲ. ಇತ್ತ ಮಾನಸಿಕನ ರಂಪಾಟವು ಮದಗಜದಂತೆ ಹೆಚ್ಚಾಯಿತು. ವಾಹನಗಳ ಜಖಂಗೊಳಿಸುವುದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಲು ಶುರು ಮಾಡಲಾರಂಭಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಸಮಾಜ ಸೇವಕರು ಒಟ್ಟಾಗಿ ಮಾನಸಿಕ ಯುವಕನನ್ನು ಹಿಡಿದು ಧಾರವಾಡದ ಮಾನಸಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಉಡುಪಿಯಲ್ಲಿ ಸರ್ಕಾರಿ ಮಾನಸಿಕ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂದು ದಶಕದಿಂದ ಒತ್ತಾಯಿಸುತ್ತಾ ಇದ್ದರೂ ಸರ್ಕಾರಗಳು ಇತ್ತ ಗಮನವನ್ನೇ ಕೊಡುತ್ತಿಲ್ಲ ಎಂಬುದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *