ಹರೀಶ್ ಸಾಳ್ವೆಗೆ 1 ರೂ. ಗೌರವಧನ ನೀಡಿ, ಅಮ್ಮನ ವಾಗ್ದಾನ ನೆರವೇರಿಸಿದ ಸುಷ್ಮಾ ಪುತ್ರಿ

ನವದೆಹಲಿ: ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರಿಗೆ 1 ರೂ. ಗೌರವಧನ ನೀಡಿ, ಅಮ್ಮನ ವಾಗ್ದಾನವನ್ನು ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ನೆರವೇರಿಸಿದ್ದಾರೆ.

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸಮರ್ಥವಾದ ವಾದ ಮಂಡನೆ ಮಾಡಿದ್ದರು. ಈ ಮೂಲಕ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಗೆಲುವು ತಂದಿದ್ದರು. ಅಷ್ಟೇ ಅಲ್ಲದೆ ಸರ್ಕಾರದಿಂದ ಕೇವಲ 1 ರೂ. ಸಂಭಾವನೆ ಪಡೆದಿದ್ದರು.

ಪುತ್ರಿ ಬಾನ್ಸುರಿ ಹರೀಶ್ ಸಾಳ್ವೆ ಅವರಿಗೆ 1 ರೂ. ಗೌರವಧನ ನೀಡುತ್ತಿರುವ ಫೋಟೋವನ್ನು ಸುಷ್ಮಾ ಪತಿ, ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಾಯಿಯ ಕೊನೆಯಾಸೆಯನ್ನು ಪುತ್ರಿ ಬಾನ್ಸುರಿ ಸ್ವರಾಜ್ ಈಡೇರಿಸಿದ್ದಾರೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

https://twitter.com/governorswaraj/status/1177605870378602501

ಸುಷ್ಮಾ ಅವರು ನಿಧನಕ್ಕೂ ಮುನ್ನ ಆಗಸ್ಟ್ 6ರಂದು ರಾತ್ರಿ 8.30ರ ಸಮಯದಲ್ಲಿ ಹರೀಶ್ ಸಾಳ್ವೆ ಅವರಿಗೆ ಫೋನ್ ಕರೆ ಮಾಡಿದ್ದರು. ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಹರೀಶ್ ಸಾಳ್ವೆ, ಅವರೊಂದಿಗೆ ನಡೆಸಿದ್ದ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡು ದುಃಖ ವ್ಯಕ್ತಪಡಿಸಿದ್ದರು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಗೆಲುವು ಪಡೆದಿದ್ದೀರಿ. ನಿಮ್ಮನ್ನು ಭೇಟಿ ಮಾಡಬೇಕಿದೆ. ನಿಮಗೆ ನೀಡಬೇಕಿದ್ದ ಶುಲ್ಕ 1 ರೂ. ಬಾಕಿ ಇದೆ. ಆಗಸ್ಟ್ 7ರಂದು (ಬುಧವಾರ) ಬೆಳಗ್ಗೆ ಮನೆಗೆ ಬನ್ನಿ ಎಂದು ಹೇಳಿದ್ದರು. ಆದರೆ ಈಗ ಅವರೇ ಇಲ್ಲ ಎಂದು ಹರೀಶ್ ಸಾಳ್ವೆ ಭಾವುಕರಾಗಿದ್ದರು.

ಅಂತರಾಷ್ಟ್ರೀಯ ನ್ಯಾಯಾಲಯ ವಿಯೆನ್ನಾದಲ್ಲಿ ಜಾಧವ್ ಪ್ರಕರಣದಲ್ಲಿ ಭಾರತದ ಪರ ವಾದ ಸಾಳ್ವೆ ಅವರು ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕರೆ ಮಾಡಿದ್ದ ಸುಷ್ಮಾ ಸ್ವರಾಜ್ ಅವರು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೇ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದರು ಎಂದು ಸಾಳ್ವೆ ಅವರು ನೆನಪಿಸಿಕೊಂಡಿದ್ದರು.

ಜಾಧವ್ ಪ್ರಕರಣವನ್ನು ವಿಶ್ವಸಂಸ್ಥೆಯ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‍ನಲ್ಲಿ ಭಾರತ ಪರ ಸಾಳ್ವೆ ಅವರು ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರದಿಂದ ಕೇವಲ 1 ರೂ. ಸಂಭಾವನೆ ಪಡೆದಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರ ಟ್ವಿಟ್ಟಿಗೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಅವರು, ಹರೀಶ್ ಸಾಳ್ವೆ ಅವರು ನಮ್ಮಿಂದ ಕೇವಲ 1 ರೂ. ಸಂಭಾವನೆ ಪಡೆಯುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *