ಮಾಯಾವತಿ-ಕಾಂಗ್ರೆಸ್ ಯಾವತ್ತೂ ಒಟ್ಟಿಗೆ ಹೋಗಲ್ಲ, ಮೋದಿ ಮಣಿಸಲು ಯಾರಿಂದ್ಲೂ ಸಾಧ್ಯವಿಲ್ಲ- ಡಿವಿಎಸ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾಯಾವತಿ-ಕಾಂಗ್ರೆಸ್ ಯಾವತ್ತೂ ಒಟ್ಟಿಗೆ ಹೋಗುವುದಿಲ್ಲ ಅಂತ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ ಅಂತ ಹೇಳಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದ್ರು.

ರಾಜ್ಯದಲ್ಲಿ ಇಷ್ಟು ಮಳೆಯಾಗುತ್ತಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಜನರು ನೀರಿನಲ್ಲಿ ಮುಳುಗುತ್ತಿದ್ದಾರೆ. ಆದ್ರೆ ಇವರಿಗೆ ಕ್ಯಾರೇ ಇಲ್ಲ. ಇವರಿಗೆ ಇವರೇ ನಾಳೆ ಮುಳುಗಿ ಹೋಗುತ್ತಾರೆ ಎಂದು ಗೊತ್ತಿದೆ ಅದಕ್ಕೆ ಇವರು ಏನೂ ಮಾಡುತ್ತಿಲ್ಲ ಅನಿಸುತ್ತೆ. ದೇಶದಲ್ಲಿ ತೃತೀಯ ರಂಗ ಹರಿದ ಬಟ್ಟೆಯ ಹಾಗಾಗಿದೆ. ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗುವುದಿಲ್ಲ ಅಂದ್ರು.

Comments

Leave a Reply

Your email address will not be published. Required fields are marked *