ರಾಹುಲ್ ಗಾಂಧಿ ಬಳ್ಳಾರಿಗೆ ಬಂದು ಹೋಗ್ತಿದ್ದಂತೆಯೇ ಜನಾರ್ದನ ರೆಡ್ಡಿ ಮಾಸ್ಟರ್ ಪ್ಲಾನ್

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವ ಹಾಗಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ, ಅನಂತಪುರ, ಕಡಪ ಜಿಲ್ಲೆಗಳ ಪ್ರವೇಶ ಮಾಡುವಾಂಗಿಲ್ಲ ಅಂತ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಹೀಗಾಗಿ ಬಳ್ಳಾರಿಗೆ ಬರದೇ ಜನಾರ್ದನ ರೆಡ್ಡಿ ಹೇಗೆ ರಾಜಕೀಯ ಮಾಡ್ತಾರೆ ಅನ್ನೋ ಕುತೂಹಲ ಸಾಕಷ್ಟು ಜನರಿಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳ್ಳಾರಿಗೆ ಬಂದು ಹೋಗುತ್ತಿದ್ದಂತೆಯೇ ಜಿಲ್ಲೆಗೆ ಎಂಟ್ರಿ ಕೊಡದೇ ರಾಜಕಾರಣ ಮಾಡಲು ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಸ್ಟರ್ ಪ್ಲಾನ್ ವೊಂದನ್ನ ಮಾಡಿದ್ದಾರೆ.

ಜನಾರ್ದನ ರೆಡ್ಡಿಯವರು ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ಒಂದಿಲ್ಲಾ ಒಂದು ರೀತಿ ಸೆನ್ಸಷೇನಲ್ ಸುದ್ದಿ ಕ್ರಿಯೇಟ್ ಮಾಡುತ್ತಾ ಬಂದಿದ್ದಾರೆ. ಇದೀಗ ಬಳ್ಳಾರಿಗೆ ಬರದೇನೆ ಜಿಲ್ಲೆಯ ರಾಜಕಾರಣ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ಬಳ್ಳಾರಿಯ ಗಡಿಭಾಗದ ಗ್ರಾಮದಲ್ಲಿ ಮನೆಯೊಂದನ್ನು ಖರೀದಿ ಮಾಡಿರುವ ಮಾಜಿ ಸಚಿವರು ಅಲ್ಲಿಂದಲೇ ರಾಜಕಾರಣ ಮಾಡಲು ಹೊರಟಿದ್ದಾರೆ.

ಬಳ್ಳಾರಿಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ರಾಂಪುರ ಹಾಗೂ ತಮ್ಮೇನಹಳ್ಳಿಯಲ್ಲಿ ಮೂರು ಮನೆ ಖರೀದಿ ಮಾಡಿದ್ದಾರೆ. ಬಳ್ಳಾರಿಯಿಂದ ಕೇವಲ 30 ಕೀಲೋ ಮೀಟರ್ ದೂರದಲ್ಲಿರುವ ಗಡಿಭಾಗಕ್ಕೆ ಹೊಂದಿಕೊಂಡಿರುವ ರಾಂಪುರ ಹಾಗೂ ತಮ್ಮೇನಹಳ್ಳಿಯಲ್ಲಿ ಮನೆ ಖರೀದಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಇದೀಗ ಅಲ್ಲಿಂದಲೇ ಜಿಲ್ಲೆಯ ರಾಜಕಾರಣದಲ್ಲಿ ಅಧಿಪತ್ಯ ಸಾಧಿಸಲು ನಿರ್ಧರಿಸಿದ್ದಾರೆ.

ತಮ್ಮೇನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಭೇಟಿಗಾಗಿ 5 ಎಕರೆ ವಿಸ್ತಾರದ ತೋಟದೊಂದಿಗೆ ಮನೆಯನ್ನು ಖರೀದಿ ಮಾಡಿದ್ರೆ, ರಾಂಪುರದಲ್ಲಿ ವಾಸವಿರಲು 2 ಪ್ರತ್ಯೇಕವಾಗಿ ಮನೆಗಳನ್ನು ಖರೀದಿ ಮಾಡಲಾಗಿದೆ. ಈ ಮೂಲಕ ಗಡಿಭಾಗದಲ್ಲಿದ್ದುಕೊಂಡೇ ಜನಾರ್ದನರೆಡ್ಡಿ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಳನ್ನು ರೂಪಿಸಲಿದ್ದಾರೆ. ಜನಾರ್ದನ ರೆಡ್ಡಿ ಗಡಿಭಾಗದಲ್ಲಿದ್ದುಕೊಂಡು ರಾಜಕಾರಣಕ್ಕೆ ಎಂಟ್ರಿ ಕೊಡಲು ಮುಂದಾಗಿರುವುದು ಇದೀಗ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮತ್ತಷ್ಟೂ ಆತ್ಮವಿಶ್ವಾಸ ತುಂಬಿದಂತಾಗಿದೆ.

Comments

Leave a Reply

Your email address will not be published. Required fields are marked *