ಅತೃಪ್ತರ ಆಟ ಸಂಪೂರ್ಣ ಮುಂಬೈಗೆ ಶಿಫ್ಟ್

ಮುಂಬೈ: ಅತೃಪ್ತರ ಆಟ ಸಂಪೂರ್ಣ ಮುಂಬೈಗೆ ಶಿಫ್ಟ್ ಆಗಿದೆ. ಶಾಸಕರ ನಿರ್ಧಾರ ಅಚಲವಾಗಿದ್ದು, ರಾಜೀನಾಮೆ ವಾಪಸ್ ಪಡೆಯದೇ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ.

ಹೌದು. ರಾಜೀನಾಮೆ ಅಂಗೀಕಾರವಾಗದೆ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಲ್ಲ ಎಂದು ಅತೃಪ್ತ ಶಾಸಕರು ಪಟ್ಟು ಹಿಡಿದಿದ್ದಾರೆ. ಈ ಮೂಲಕ ಅತೃಪ್ತ ಶಾಸಕರು ಸರ್ಕಾರ ಉರುಳಿಸಲು ಮುಂಬೈನಿಂದಲೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಹಾಗೂ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಕೂಡ ಇದೀಗ ಅತೃಪ್ತರ ಬಳಗ ಸೇರಿಕೊಂಡಿದ್ದಾರೆ. ಇತ್ತ ಅತೃಪ್ತ ಶಾಸಕರನ್ನು ಕಲಬುರಗಿ ಸಂಸದ ಉಮೇಶ್ ಜಾಧವ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇಂದು ನಾಸಿಕ್‍ನ ತ್ರಯಂಬಕೇಶ್ವರನ ದರ್ಶನ ಮುಗಿಸಿ ಸಂಜೆ ಮತ್ತೆ ಮುಂಬೈಗೆ ಅತೃಪ್ತ ಶಾಸಕರು ವಾಪಸ್ ಆಗಲಿದ್ದಾರೆ. ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶಾಸಕರು ಶಪಥ ಮಾಡಿದ್ದು, ಇಟ್ಟ ಹೆಜ್ಜೆಯನ್ನ ಹಿಂದಿಡದಿರಲು ದಿಟ್ಟ ನಿರ್ಧಾರ ಮಾಡಿದ್ದಾರೆ. ಅಲ್ಲದೆ ವಿಶ್ವಾಸಮತ ಯಾಚನೆ ಮುಗಿಯವವರೆಗೂ ರಾಜ್ಯಕ್ಕೆ ಮರಳದಿರಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ನೀಡುವ ತೀರ್ಪಿಗೆ ಅತೃಪ್ತರು ಕಾಯುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಬಿಜೆಪಿ ಹಾಗೂ ಉಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಜನರು ಬೇಸತ್ತಿದ್ದಾರೆ. ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕಾಗಿರುವ ನಾಯಕರೇ ಹೀಗೆ ರೆಸಾರ್ಟ್ ರಾಜಕೀಯ ಮಾಡಿಕೊಂಡು ಇದ್ದರೆ ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ.

Comments

Leave a Reply

Your email address will not be published. Required fields are marked *