ದೆಹಲಿಯಲ್ಲಿ ಅಗ್ನಿ ದುರಂತ- ಹೆಲಿಕಾಪ್ಟರ್ ಬಳಸಿ ನಂದಿಸೋ ಕಾರ್ಯವನ್ನ ನೋಡಿ

ನವದೆಹಲಿ: ನಗರದ ಮಾಳವಿಯ ನಗರದ ಗೋದಾಮಿನಲ್ಲಿ ನಿನ್ನೆ ರಾತ್ರಿ ಬೃಹತ್ ಅಗ್ನಿ ದುರಂತ ಸಂಭವಿಸಿರುವ ಘಟನೆ ನಡೆದಿದೆ.

ವಾಯುಪಡೆಯ ಎಮ್‍ಐ-17 ಹೆಲಿಕಾಪ್ಟರ್ ಬಳಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇತ್ತೀಚೆಗೆ ನಗರ ಕಂಡ ಬೃಹತ್ ಅಗ್ನಿ ದುರಂತ ಇದಾಗಿದೆ ಎನ್ನಲಾಗಿದೆ.

ನಗರದ ಖಿರ್ಕಿ ಎಕ್ಸ್‍ಟೆನ್ಶನ್ ನ ಗೊದಾಮಿನಲ್ಲಿ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಜನನಿಭಿಡ ಪ್ರದೇಶ ಮಾಳವಿಯ ನಗರವಾಗಿದ್ದು ಸುಮಾರು 80 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಪಕ್ಕದ ಕಟ್ಟಡಗಳಿಗೆ ಹಾಗೂ ಶಾಲೆಗೆ ಬೆಂಕಿ ಪಸರಿಸದಂತೆ ಸಾಕಷ್ಟು ಅಗ್ನಶಾಮಕ ಸಿಬ್ಬಂಧಿಗಳು ರಾತ್ರಿಯಿಡಿ ನೋಡಿಕೊಂಡಿದ್ದಾರೆ. ಹೊಗೆ ಮೇಲೇಳುತ್ತಿರುವುದನ್ನು ದಕ್ಷಿಣ ದೆಹಲಿಯ ಯಾವ ಭಾಗದಲ್ಲಿ ನಿಂತರೂ ನೋಡಬಹುದಾಗಿತ್ತು.

ಗೋದಾಮಿನ ಬಳಿ ನಿಲ್ಲಿಸಿದ್ದ ರಬ್ಬರ್ ತುಂಬಿದ ಟ್ರಕ್ ಗೆ ಮೊದಲು ಬೆಂಕಿ ಹತ್ತಿದೆ. ತುಂಬಾ ಗಾಳಿ ಬೀಸುತ್ತಿದ್ದರಿಂದ ತಕ್ಷಣವೇ ಪಕ್ಕದಲ್ಲೇ ಇದ್ದ ಗೋದಾಮಿಗೂ ಬೆಂಕಿ ಪಸರಿಸಿದೆ. ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ ಹಾಗೂ ಕಚ್ಛಾ ವಸ್ತುಗಳು ಬೆಂಕಿ ಹೆಚ್ಚಾಗಲು ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಗೋದಾಮಿನ ಪಕ್ಕದಲ್ಲಿರುವ ಸುಮಾರು 15 ಮನೆಗಳಿಂದ ಜನರನ್ನು ಖಾಲಿಮಾಡಿಸಲಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ಒಬ್ಬ ಅಗ್ನಿ ಶಾಮಕ ಸಿಬ್ಬಂದಿಗೆ ಗಾಯವಾಗಿದೆ. ದಾರಿ ಚಿಕ್ಕದಿರುವುದರಿಂದ ಅಗ್ನಿ ಶಾಮಕ ವಾಹನಗಳಿಗೆ ನಂದಿಸುವ ಕಾರ್ಯದಲ್ಲಿ ಸ್ವಲ್ಪ ಅಡಚಣೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *