ಒಂದೇ ಕುಟುಂಬದ 6 ಮಂದಿಯ ಆತ್ಮಹತ್ಯೆ- ಕಾರಣ ಕೊಟ್ಟ ಎಸ್‍ಪಿ

ಕೊಪ್ಪಳ: ಒಂದೇ ಕುಟುಂಬದ ಆರು ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮಕ್ಕೆ ಎಸ್‍ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ ರೇಣುಕಾ, ಸಾವಿಗೆ ಹಲವು ಕಾರಣಗಳಿರಬಹುದು. ಈಗಾಗಲೇ ತನಿಖೆ ಆರಂಭವಾಗಿದ್ದು, ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಅಂತಾ ತಿಳಿಸಿದರು.

ಶೇಖರಯ್ಯ ಎಂಬಾತ ತನ್ನ ಪತ್ನಿ ಮತ್ತು ನಾಲ್ವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಕೊನೆಗೆ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶುಕ್ರವಾರ ಸಂಜೆ ಮನೆಯ ಬಾಗಿಲು ಹಾಕಿಕೊಂಡಿದ್ದ ಶೇಖರಯ್ಯ ಕುಟುಂಬಸ್ಥರು, ಇಂದು ಬೆಳಗ್ಗೆಯಾದ್ರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಜನರಿಗೆ ಅಡುಗೆ ಮನೆಯಲ್ಲಿ ಐವರ ಶವ ಕಂಡು ಬಂದಿದ್ದು, ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್ ಪಿ ರೇಣುಕಾ ಸ್ಪಷ್ಟಪಡಿಸಿದರು.

ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ಸ್ಥಳೀಯರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಸ್ಥಳದಲ್ಲಿ ವಿಷದ ವಾಸನೆ ಬರುತ್ತಿದ್ದು, ತಂದೆಯೇ ಪತ್ನಿ ಮತ್ತು ಮಕ್ಕಳನ್ನು ಸಾಯಿಸಿ ಕೊನೆಗೆ ತಾನು ನೇಣು ಹಾಕಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಮೃತ ಶೇಖರಯ್ಯ ತನ್ನ ಸೋದರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದರೂ ಸಾಂಸಾರಿಕ ಕಲಹದಿಂದಾಗಿ ತವರು ಮನೆ ಸೇರಿಕೊಂಡಿದ್ದರು. ಉಳಿದ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಶೇಖರಯ್ಯ ವರನ ಹುಡುಕಾಟದಲ್ಲಿದ್ದರು ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ ಎಂದು ಎಸ್ ಪಿ ಹೇಳಿದ್ದಾರೆ.

ಸಾಮೂಹಿಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾವು ಸಹ ಮರಣೋತ್ತರ ಶವ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಸ್ಥಳೀಯರಿಂದ ಮತ್ತು ಸಂಬಂಧಿಕರಿಂದಲೂ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಸ್.ಪಿ. ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *