ಕೈ ಶಾಸಕ ಪ್ರತಾಪ್ ಗೌಡ ಪಾಟೀಲ್ ಮನೆಗೆ ಕಾರ್ಯಕರ್ತರ ಮುತ್ತಿಗೆ- ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

ರಾಯಚೂರು: ಜಿಲ್ಲೆಯ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ಸಂಜೆಯೊಳಗೆ ಸಂಪರ್ಕಕ್ಕೆ ಬಾರದಿದ್ದರೆ ನಾಳೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಣ್ಣ ಇರಬಗೇರಾ ಎಚ್ಚರಿಕೆ ನೀಡಿದ್ದಾರೆ.

ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ರಾಮಣ್ಣ ಪ್ರತಾಪ್ ಗೌಡ ಕಾಂಗ್ರೆಸ್ ಮುಖಂಡರೊಂದಿಗೆ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾರೆ. ನಿನ್ನೆ ಸಂಜೆ 4 ಗಂಟೆಯಿಂದ ನಾಪತ್ತೆಯಾಗಿರುವ ಪ್ರತಾಪ್ ಗೌಡ ಅವರು ಕೂಡಲೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಸಂಪರ್ಕಿಸಬೇಕು. ಸಂಪರ್ಕಕ್ಕೆ ಬಾರದಿದ್ದರೆ ಮಸ್ಕಿಯಲ್ಲಿನ ಪ್ರತಾಪ್ ಗೌಡ ಪಾಟೀಲ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ.

 

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಳಿಕ ಕಾಂಗ್ರೆಸ್‍ನಿಂದ ಆಯ್ಕೆ ಆಗಿದ್ದ ಪ್ರತಾಪ್ ಗೌಡ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪಕ್ಷದ ನಾಯಕರು ಸತತವಾಗಿ ಪಾಟೀಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಅವರ ಈ ನಡೆಯಿಂದ ಕಾಂಗ್ರೆಸ್ ನಾಯಕರು ತೀವ್ರ ಸಂಕಟ ಎದುರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಬಿಜೆಪಿ ನಾಯಕ ಶ್ರೀ ರಾಮುಲು ಹಾಗೂ ಎಂಎಲ್‍ಸಿ ಮನೋಹರ್ ಮಸ್ಕಿ ಅವರ ಪ್ರಭಾವದಿಂದ ದೆಹಲಿಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *