ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

ಚಾಮರಾಜನಗರ: “ಹರಕೆ ಮಾಡಿಕೊಂಡಿದ್ದಕ್ಕೆ ಮಗು ಕೊಟ್ಟೆ, ಆದರೆ ನನ್ನ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ” ಎಂದು ಹೇಳಿ ಸುಳ್ವಾಡಿ ಗ್ರಾಮದ ಬಾಣಂತಿಯೊಬ್ಬರು ಈಗ ಕಣ್ಣೀರು ಹಾಕುತ್ತಿದ್ದಾರೆ.

ಹುನೂರು ತಾಲೂಕಿನ ಸುಳ್ವಾಡಿ ಗ್ರಾಮದ ಶಾಂತರಾಜು ಅವರಿಗೆ ಮದುವೆಯಾಗಿ ಮಕ್ಕಳಾಗಿರಲಿಲ್ಲ. ಮಕ್ಕಳಾಗದ್ದಕ್ಕೆ ಓಂ ಶಕ್ತಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದರು. ದೇವಿಯ ಅನುಗ್ರಹವೆಂಬಂತೆ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಹುಟ್ಟಿತ್ತು.

ದೇವಿಯ ಹರಕೆಯಿಂದಲೇ ಮಗು ಜನನವಾಗಿದೆ ಎಂದು ತಿಳಿದು ದಂಪತಿ ಖುಷಿಯಿಂದ ಈ ಹರಕೆ ತೀರಿಸಲು ಶುಕ್ರವಾರ ಬೆಳಗ್ಗೆ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿದ್ದರು. ವಿಧಿ ಬರಹ ಘೋರ ಎನ್ನುವಂತೆ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕ ಶಾಂತರಾಜು ಪ್ರಸಾದವನ್ನು ಸೇವಿಸಿದ್ದಾರೆ. ಪ್ರಸಾದವನ್ನು ತಿಂದು ಅಸ್ವಸ್ಥಗೊಂಡಿದ್ದ ಶಾಂತರಾಜು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪತಿ ಮೃತಪಟ್ಟ ಶಾಕಿಂಗ್ ವಿಚಾರ ತಿಳಿದು ಮೂರು ತಿಂಗಳ ಮಗುವಿನೊಂದಿಗೆ ಬಾಣಂತಿ,”ಮಗುವನ್ನ ಕೊಟ್ಟು ಪತಿಯನ್ನ ಕಿತ್ತುಕೊಂಡಾ ದೇವರೇ. ಅಮ್ಮಾ, ಯಾಕೆ ನನಗೆ ಈ ಕಷ್ಟವನ್ನು ಕೊಟ್ಟೆ” ಎಂದು ಹೇಳಿ ರೋಧಿಸುತ್ತಿದ್ದಾರೆ. ಬಾಣಂತಿಯ ನೋವನ್ನು ಕೇಳಿ ಸ್ಥಳದಲ್ಲಿದ್ದ ಜನ ಸಹ ಕಣ್ಣೀರು ಹಾಕುತ್ತಿದ್ದಾರೆ. ಪುಟ್ಟ ಕಂದಮ್ಮನ್ನು ಹಿಡಿದು ಆಡಿಸಬೇಕಾದ ತಂದೆ ಈಗ ಶವವಾಗಿದ್ದಾರೆ. ಮಗುವಿನ ಜನನೊಂದಿಗೆ ಸಂಭ್ರಮದಲ್ಲಿದ್ದ ಕುಟುಂಬ ಈಗ ಸೂತಕದ ಛಾಯೆಯಲ್ಲಿದೆ.

ಪ್ರಸಾದ ದುರಂತದಲ್ಲಿ ಒಂದೇ ಗ್ರಾಮದ 7 ಮಂದಿ ಮೃತಪಟ್ಟಿದ್ದು, ಈಗಾಗಲೇ ಮೃತದೇಹಗಳನ್ನು ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಗ್ರಾಮಸ್ಥರು ಸಾಮೂಹಿಕವಾಗಿ ಬೆಂಕಿ ಇಟ್ಟು ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

ಏನು ಹೇಳಲು ಸಾಧ್ಯವಿಲ್ಲ: ಸದ್ಯಕ್ಕೆ ಅಸ್ವಸ್ಥರಾಗಿರುವ ಜನರ ಆರೋಗ್ಯದ ಬಗ್ಗೆ ಇನ್ನೂ 15 ದಿನ ಏನೂ ಹೇಳುವುದಕ್ಕೆ ಆಗಲ್ಲ. ಮಾರಮ್ಮ ದೇವಿಯ ಭಕ್ತರ ದೇಹ ಸೇರಿರುವುದು ಅಪಾಯಕಾರಿ ವಿಷವಾಗಿದೆ. ಕೀಟನಾಶಕ ಮಿಶ್ರಣವಾಗಿರುವ ಕಾರಣ ಅಸ್ವಸ್ಥರು ಔಟ್ ಆಫ್ ಡೇಂಜರ್ ಅಂತ ಹೇಳಲು ಅಸಾಧ್ಯವಾಗಿದ್ದು, ಅದಕ್ಕೆ ಇನ್ನೂ ಸಮಯ ಬೇಕು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *