ಬುಲೆಟ್ ಬೈಕ್ ಏರಿ ದಿಢೀರ್ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಹರ್ಯಾಣ ಸಿಎಂ!

ಚಂಡಿಘಡ್: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಬೈಕ್ ರೈಡ್ ಮೂಲಕ ಕರ್ನಲ್‍ನಲ್ಲಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.

ಕರಣ್ ಸ್ಟೇಡಿಯಂ ನಲ್ಲಿ ಸ್ಪರ್ಧಾಳುಗಳಿಗೆ ಸೌಲಭ್ಯ ಕಲ್ಪಿಸಲು ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಸಿಎಂ ಮನೋಹರ್ ಲಾಲ್ ಖಟ್ಟರ್ ರಾಯಲ್ ಎನ್‍ಫೀಲ್ಡ್ ಬೈಕ್ ಏರಿ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖಟ್ಟರ್ ಕರ್ನಾಲ್ ಶಾಸಕರಾಗಿದ್ದು, ಕರಣ್ ಸ್ಟೇಡಿಯಂ ಗೆ ದಿಢೀರ್ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ನ ಫುಟ್ ಬಾಲ್ ಗ್ರೌಂಡ್, ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಹಲವು ಕೆಲಸಗಳನ್ನು ವೀಕ್ಷಿಸಿದರು.

ಬೆಳಗಿನ ಜಾವ ಏಕಾಏಕಿಯಾಗಿ ರಾಯಲ್ ಎನ್‍ಫೀಲ್ಡ್ ಬೈಕ್ ಏರಿ ಬಂದ ಸಿಎಂ ಫುಟ್ ಬಾಲ್ ಗ್ರೌಂಡ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ನಿಗದಿತ ಸಮಯದೊಳಗ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಿಎಂ, ಆಟಗಾರರ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಸ್ಪರ್ಧಿಗಳು ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೇ ಕೀರ್ತಿ ತರುವಂತಾಗಬೇಕು ಎಂದರು. ಅಲ್ಲದೇ ಸ್ಟೇಡಿಯಂನ ಒಳಚರಂಡಿ ವ್ಯವಸ್ಥೆ ಕುರಿತು ಎಂಜಿನಿಯರ್ ರೊಂದಿಗೆ ಚರ್ಚೆ ನಡೆಸಿದರು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸ್ಟೇಡಿಯಂ ನ ಅಧಿಕಾರಿಗಳು ಸಿಎಂ ನಿರ್ದೇಶನದಂತೆ ಫುಟ್ ಬಾಲ್ ಗ್ರೌಂಡ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ಪೂರ್ಣಗೊಳಿಸಲು ಈ ವರ್ಷದ ಡಿಸೆಂಬರ್ ವರೆಗೂ ಅವಧಿ ಇದೆ. ಆದರೆ ನವೆಂಬರ್ ಒಳಗಡೆ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಆಟಗಾರರೊಂದಿಗೆ ಮಾತುಕತೆ ನಡೆಸಿದ ಸಿಎಂ ಸ್ಟೇಡಿಯಂನಲ್ಲಿ ಆಟಗಾರರಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಸೇರಿದಂತೆ ಹಲವು ಅನುಕೂಲತೆಗಳನ್ನು ಒದಗಿಸಿಕೊಡುವುದಾಗಿ ಹೇಳಿದರು. ಆಟಗಾರರ ಬೇಡಿಕೆಯಂತೆ ಸ್ಟೇಡಿಯಂನಲ್ಲಿ ಸ್ಕೇಟಿಂಗ್ ಹಾಲ್ ನಿರ್ಮಾಣಕ್ಕೆ ಡೆಪ್ಯುಟಿ ಕಮಿಶನರ್ ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಹೇಳಿದರು.

Comments

Leave a Reply

Your email address will not be published. Required fields are marked *