ಪಶ್ಚಿಮ ಘಟ್ಟದಲ್ಲಿ ಮಳೆ- ಕುಕ್ಕೆಯಲ್ಲಿ ಮುಳುಗಿದ ಸ್ನಾನಘಟ್ಟ

– ಪ್ರವಾಹದ ನೀರಿನಲ್ಲೇ ಪುಣ್ಯಸ್ನಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ಇದೀಗ ತುಂಬಿ ಹರಿಯಲಾರಂಭಿಸಿದೆ.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತಾದಿಗಳು ಪ್ರವಾಹದ ನೀರಲ್ಲೇ ಪುಣ್ಯಸ್ನಾನವನ್ನು ಮಾಡುತ್ತಿದ್ದಾರೆ. ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ.

ಬಂಟ್ವಾಳದಲ್ಲಿ ನೇತ್ರಾವತಿ 7.7 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಬಂಟ್ವಾಳದಲ್ಲಿ ನದಿಯ ಅಪಾಯದ ಮಟ್ಟ 9 ಮೀಟರ್ ಆಗಿದ್ದು, ಮಳೆ ಹೀಗೇ ಮುಂದುವರಿದಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುವ ಸಾಧ್ಯತೆ ಇದೆ.

ಈ ಬಾರಿ ಇದೇ ಮೊದಲ ಬಾರಿ ನದಿಗಳು ತುಂಬಿದ್ದು ರಭಸವಾಗಿ ಹರಿಯುತ್ತಿವೆ. ಜೂನ್ ತಿಂಗಳು ಪೂರ್ತಿ ಮಳೆಯಾಗದೆ ಈ ಬಾರಿ ಮಳೆ ಕೊರತೆಯಾಗಿತ್ತು. ಇನ್ನೂ ಎರಡು ದಿನ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *