ಕೇರಳ ಗಡಿ ದಾಟಲು ಯತ್ನ- ತಡೆದ ಪೊಲೀಸರ ಮೇಲೆ ಕಲ್ಲು ತೂರಾಟ

ಮಂಗಳೂರು: ಕೊರೊನಾ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆ ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪರಪ್ಪೆಯ ಸಿನಾನ್ ಬಂಧಿತ ಆರೋಪಿಯಾಗಿದ್ದಾನೆ. ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮನಾಯ್ಕ ಅವರು ಜನ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿನಾನ್ ಮುರೂರು ಗಡಿಭಾಗಕ್ಕೆ ಬಂದು ಪೊಲೀಸರ ಮಾತನ್ನು ಕೇಳದೇ ಗಡಿ ದಾಟಲು ಯತ್ನಿಸಿದ್ದಾನೆ.

ಗಡಿ ದಾಟದಂತೆ ಪೊಲೀಸರು ಮನವಿ ಮಾಡುತ್ತಿದ್ದಂತೆ ಏಕಾಏಕಿ ಪೋಲೀಸರ ಮೇಲೆ ಕಲ್ಲು ಬಿಸಾಡಲು ಆರಂಭಿಸಿದ್ದಾನೆ. ಪರಿಣಾಮ ಕರ್ತವ್ಯದಲ್ಲಿದ್ದ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಪೋಲಿಸ್ ಸಿಬ್ಬಂದಿ ರಾಮನಾಯ್ಕ ಅವರಿಗೆ ಗಾಯಗಳಾಗಿದೆ. ಮಾತ್ರವಲ್ಲದೆ ಈತ ಸ್ಧಳದಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೂ ಕಲ್ಲು ಬಿಸಾಡಲು ಆರಂಭಿಸಿದ್ದಾನೆ.

ಕೂಡಲೇ ವಿಷಯ ತಿಳಿದು ಸುಳ್ಯ ಎಸ್.ಐ. ಹರೀಶ್ ಕೂಡ ಮುರೂರಿಗೆ ಆಗಮಿಸಿದ್ದು, ಗಾಯಾಳು ಪೊಲೀಸರಿಗೆ ಚಿಕಿತ್ಸೆ ನೀಡಲಾಗಿದೆ. ಕಲ್ಲು ಹೊಡೆದ ಬಳಿಕ ಆರೋಪಿ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದಾರೆ.

ಬಂಧಿತ ಸಿನಾನ್ ಮಾನಸಿಕ ಅಸ್ವಸ್ಥನಾಗಿರುವ ಕಾರಣದಿಂದ ಪ್ರಕರಣ ದಾಖಲಿಸಿಕೊಂಡು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದಾರೆ.

Comments

Leave a Reply

Your email address will not be published. Required fields are marked *