ಪೇಜಾವರ ಶ್ರೀಗಳ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಅಲೋಕ್ ಕುಮಾರ್

ಮಂಗಳೂರು: ದೇಶ ಕಂಡ ಅಪರೂಪದ ಯತಿವರೇಣ್ಯರಾದ ಪೇಜಾವರ ಶ್ರೀಗಳ ನಿಧನ ಭಾರತ ದೇಶಕ್ಕೆ ತುಂಬಲಾರದ ನಷ್ಟ ಎಂದು ವಿಶ್ವ ಹಿಂದೂ ಪರಿಷತ್‍ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸಂತಾಪ ಸೂಚಿಸಿದರು.

ಮಂಗಳೂರಿನ ಸಂಘನಿಕೇತನದಲ್ಲಿ ಐದು ದಿನಗಳ ಕಾಲ ನಡೆದ ವಿಶ್ವ ಹಿಂದೂ ಪರಿಷತ್‍ನ ಅಂತರಾಷ್ಟ್ರೀಯ ಬೈಠಕ್‍ನಲ್ಲಿ ಭಾಗವಹಿಸಿದ ಅವರು ಪೇಜಾವರ ಶ್ರೀಗಳ ಸಾಧನೆಯ ಬಗ್ಗೆ ಮೆಲುಕು ಹಾಕಿಕೊಂಡರು. ಪೇಜಾವರ ಶ್ರೀಗಳು ರಾಮ ಜನ್ಮ ಭೂಮಿಗಾಗಿ ಆಂದೋಲನ ಮಾಡಿದವರಲ್ಲಿ ಮುಂಚೂಣಿಯಲ್ಲಿ ಇದ್ದರು. ಆರ್ಟಿಕಲ್ 29-30 ಬಗ್ಗೆಯೂ ಧ್ವನಿ ಎತ್ತುವಂತೆ ಸ್ವಾಮೀಜಿ ಸೂಚಿಸಿದ್ದರು. ಅಸ್ಪೃಶ್ಯತೆ ವಿರುದ್ಧ ಹೋರಾಟದಲ್ಲಿ ಸ್ವಾಮೀಜಿ ವಿಎಚ್‍ಪಿ ಜೊತೆಯಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿರ್ದೇಶನದಂತೆ ಮುಂದಿನ ದಿನಗಳಲ್ಲಿಯೂ ವಿಶ್ವ ಹಿಂದೂ ಪರಿಷತ್ ನಡೆಯಲಿದೆ ಎಂದರು.

ರಾಮ ಮಂದಿರ ನಿರ್ಮಾಣ ವಿಚಾರಕ್ಕಾಗಿ ಈ ಬಾರಿ ದೇಶದ ಜನ ಪ್ರತೀ ಮನೆ, ಗ್ರಾಮದಲ್ಲಿ ರಾಮ ನವಮಿಯನ್ನು ಆಚರಿಸಲಿದ್ದಾರೆ. ಇಡೀ ವಿಶ್ವದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಳಿಸುವಂತೆ ವಿಎಚ್‍ಪಿಯಿಂದ ಜನರಲ್ಲಿ ಮನವಿ ಮಾಡುತ್ತೇವೆ ಎಂದರು. ಶ್ರೀ ರಾಮ ಸಮಾಜದ ಎಲ್ಲಾ ವರ್ಗಗಳ ಹತ್ತಿರ ಹೋಗಿದ್ದರು, ಅದೇ ರೀತಿ ಸಮಾಜದ ಎಲ್ಲಾ ವರ್ಗಗಳನ್ನು ಸಂಪರ್ಕಿಸಿ ಒಂದುಗೂಡಿಸುವ ಕೆಲಸ ವಿಎಚ್‍ಪಿ ಮಾಡಲಿದೆ. 2025ಕ್ಕೆ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಿಳೆಯರು, ಹಿರಿಯರು, ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗೆ ಕಾರ್ಯಕ್ರಮ ಕೈಗೊಳ್ಳುವುದರ ಜೊತೆಗೆ ಸರ್ಕಾರ ಸಮಾಜದ ಒಂದುಗೂಡುವಿಕೆಯಲ್ಲಿ ಐದು ವಿಚಾರ ತೆಗೆದುಕೊಳ್ಳಲಿದೆ. ಭೋಜನ, ಬಟ್ಟೆ, ಮನೆ, ಶಿಕ್ಷಣ, ಉದ್ಯೋಗದ ಬಗ್ಗೆ ಪ್ರಚಾರ ನಡೆಸಲು ಬೈಠಕ್‍ನಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *