ಆಸ್ಪತ್ರೆಯಿಂದ ನರ್ಸ್ ನಾಪತ್ತೆ- ಹೆತ್ತವರಿಂದ ಪೊಲೀಸರಿಗೆ ದೂರು

ಮಂಗಳೂರು: ನಗರದ ಹೊರವಲಯ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಕುಂಭಾಷಿ ಆನೆಗುಡ್ಡೆ ದೇವಸ್ಥಾನ ಬಳಿಯ ನಿವಾಸಿ ಸ್ವಾತಿ (20) ನಾಪತ್ತೆಯಾದ ನರ್ಸ್. ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಾತಿ ಮಾರ್ಚ್ 8ರಂದು ಆಸ್ಪತ್ರೆಯ ಹಾಸ್ಟೆಲ್‍ಗೆ ಹೋಗಿ ಅಲ್ಲಿಂದ ರಾತ್ರಿ 8 ಕ್ಕೆ ಆಕೆಯ ದೊಡ್ಡಮ್ಮ ಶಿವಮ್ಮ ಎಂಬವರ ಜತೆಯಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಆಕೆ ದೊಡ್ಡಮ್ಮನ ಜೊತೆ ಹೋಗದೆ ನಾಪತ್ತೆಯಾಗಿದ್ದಾಳೆ.

ಮಗಳು ಕಾಣೆಯಾದ ಕುರಿತು ತಾಯಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಸ್ವಾತಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಿರುವ ಪೊಲೀಸರು, ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ ಮಂಗಳೂರು ನಗರ (0824- 2220800) ಅಥವಾ ಪಿಐ/ಪಿಎಸ್‍ಐ ಉಳ್ಳಾಲ ಪೊಲೀಸ್ ಠಾಣೆ (0824- 2466269)ಗೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *