ಡಾ.ಯು.ಪಿ ಶಿವಾನಂದರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ

ಮಂಗಳೂರು: ಕರ್ನಾಟಕ ರಾಜ್ಯ ಸರಕಾರ ಪ್ರಕಟಿಸಿರುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ತನ್ನ ಪತ್ರಿಕೆಯ ಓದುಗರಿಗೆ ಅರ್ಪಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ ಯು.ಪಿ. ಶಿವಾನಂದ ಹೇಳಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಪುತ್ತೂರಿನ ಡಾಕ್ಟರ್ ಯು.ಪಿ.ಶಿವಾನಂದ ಅವರನ್ನು 2018ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ವೃತ್ತಿಯಲ್ಲಿ ವೈದ್ಯರಾದ ಶಿವಾನಂದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರಿನಲ್ಲಿ ತಾಲೂಕು ಮಟ್ಟದ ಸುದ್ದಿ ಬಿಡುಗಡೆ ಪತ್ರಿಕೆಗಳನ್ನು ಕಳೆದ ಮೂರು ದಶಕಗಳಿಂದ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಬೇಕಾಗುವ ಎಲ್ಲ ರೀತಿಯ ಮಾಹಿತಿ, ಅತ್ಯಂತ ಖಚಿತ ಸುದ್ದಿಗಳನ್ನು ಪ್ರಕಟಿಸಿರುವುದಕ್ಕಾಗಿ ಸುದ್ದಿ ಬಿಡುಗಡೆ ಪತ್ರಿಕೆ ಜನಮನ್ನಣೆ ಪಡೆದುಕೊಂಡಿದೆ.

ಸರ್ಕಾರ ಪ್ರಕಟಿಸಿರುವ ಪ್ರಶಸ್ತಿಯು ತನ್ನ ಪತ್ರಿಕೆಯ ಓದುಗರು, ಸಿಬ್ಬಂದಿ ಜಾಹೀರಾತುದಾರಿಗೆ ನೀಡಿದ ಗೌರವವಾಗಿದೆ ಎಂದು ಡಾ.ಯು.ಪಿ.ಶಿವಾನಂದ ಹೇಳಿದ್ದಾರೆ.

ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ-ತಾಂಬೂಲ ಒಳಗೊಂಡಿದ್ದು, ಜನವರಿ ಮೊದಲ ವಾರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *