ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

ಮಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಇಂದು ದೇವಸ್ಥಾನ ಹಾಗೂ ಚರ್ಚ್ ನಲ್ಲಿ ಗಳಗಳನೆ ಅತ್ತುಬಿಟ್ಟರು.

ಜನಾರ್ದನ ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಚರ್ಚ್ ಗೆ ತೆರಳಿದ್ದರು. ಈ ವೇಳೆ ಅಲ್ಲಿ ಆಸ್ಕರ್ ಅವರನ್ನು ಕಂಡು ಪೂಜಾರಿ ಅವರು ಬೇಸ್ತು ಬಿದ್ದರು.

ಆಸ್ಕರ್ ಫೆರ್ನಾಂಡಿಸ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಮಾಹಿತಿ ತಿಳಿದ ಪೂಜಾರಿಯವರು ದಿಢೀರನೆ ದೇವಸ್ಥಾನ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗೆ ತೆರಳಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿದ ಪೂಜಾರಿ, ಅಲ್ಲಿ ಆಸ್ಕರ್ ನೆನೆದು ಗಳಗಳನೆ ಅತ್ತಿದ್ದೂ ಆಗಿತ್ತು. ಬಳಿಕ ನಗರದ ರೊಸಾರಿಯೋ ಚರ್ಚ್ ಗೆ ಪ್ರಾರ್ಥನೆಗಾಗಿ ತೆರಳಿದ ಸಂದರ್ಭದಲ್ಲಿ ಸ್ವತಃ ಆಸ್ಕರ್ ಫೆರ್ನಾಂಡಿಸ್ ಚರ್ಚ್ ನಲ್ಲಿರುವುದನ್ನು ಕಂಡು ಪೂಜಾರಿ ಒಂದು ಕ್ಷಣ ವಿಚಲಿತರಾದರು.

ಬಳಿಕ ಆಸ್ಕರ್ ಜೊತೆಗೆ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸಿದ ಪೂಜಾರಿ ಅವರು ಪರಸ್ಪರ ಆಲಿಂಗಿಸಿಕೊಂಡರು. ಆಸ್ಕರ್ ಅವರಿಗೆ ಹುಷಾರಿಲ್ಲ ಎಂದು ಪೂಜಾರಿಯವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಪೂಜಾರಿ, ದೇವರಲ್ಲಿ ಪ್ರಾರ್ಥನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದರು. ಎದ್ದು ನಡೆಯಲಾಗದ ಸ್ಥಿತಿಯಲ್ಲಿರುವ ಜನಾರ್ದನ ಪೂಜಾರಿ ಅವರು, ತಮಗಿಂತ ಕಿರಿಯರಾಗಿರುವ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತೆರಳುವಂತೆ ಮಾಡಿದ್ದು ಯಾರೆಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

Comments

Leave a Reply

Your email address will not be published. Required fields are marked *