ಸಿಎಎ ಪರ ಭಿತ್ತಿಪತ್ರ ಹಂಚಿಕೆ: ಬಿಜೆಪಿಗರಿಗೆ ತಟ್ಟಿದ ಗೋ ಬ್ಯಾಕ್ ಬಿಸಿ

ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ಪರ ಭಿತ್ತಿಪತ್ರ ಹಂಚಿಕೆ ವೇಳೆ ಬಿಜೆಪಿಗರನ್ನು ಗೋಬ್ಯಾಕ್ ಎಂದು ಓಡಿಸಿದ ಪ್ರಸಂಗ ಮಂಗಳೂರಿನ ಉಳ್ಳಾಲ ಸಮೀಪದ ತೊಕ್ಕೊಟ್ಟಿನಲ್ಲಿ ನಡೆದಿದೆ.

ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಲೇ ಇದೆ. ಮಂಗಳೂರಿನಲ್ಲಿ ಈ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಗೋಲಿಬಾರ್ ಗೆ ಸಾವನ್ನಪ್ಪಿದ್ದರು. ಇದೀಗ ರಾಜ್ಯದ ಎಲ್ಲೆಡೆ ಬಿಜೆಪಿ ಸಿಎಎ ಪರವಾಗಿ ಜಾಗೃತಿ ಮಾಡಿಸುತ್ತಿದ್ದೆ. ಅದರಂತೆ ಮಂಗಳೂರಿನಲ್ಲೂ ಬಿಜೆಪಿ ಕಾರ್ಯಕರ್ತರು ಕಾಯ್ದೆಯ ಪರವಾಗಿ ಬುಧವಾರ ಜಾಗೃತಿ, ಪ್ರಚಾರವನ್ನು ನಡೆಸಿದರು.

ತೊಕ್ಕೊಟ್ಟಿನಲ್ಲಿ ಪೌರತ್ವ ಕಾಯ್ದೆಯ ಪರವಾಗಿ ಭಿತ್ತಿಪತ್ರಗಳನ್ನು ಉಳ್ಳಾಲ ವ್ಯಾಪ್ತಿಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಂಚುತ್ತಿದ್ದರು. ತೊಕ್ಕೊಟ್ಟಿನ ವಾಣಿಜ್ಯ ಮಳಿಗೆಗಳ ಕಟ್ಟಡಕ್ಕೆ ಬಿಜೆಪಿ ತಂಡ ಭೇಟಿ ನೀಡಿದಾಗ ಕೆಲ ಸಮುದಾಯದ ಅಂಗಡಿಯ ಮಾಲೀಕರು ಈ ತಂಡವನ್ನು ತಡೆದು ನಮಗೆ ಸಿಎಎ, ಎನ್‌ಆರ್‌ಸಿ ಬಗ್ಗೆ ಬೇಕಾದಷ್ಟು ಮಾಹಿತಿ ಇದೆ. ನಿಮ್ಮ ಮೂಲಕ ನಮಗೆ ಮಾಹಿತಿಯ ಅಗತ್ಯತೆ ಇಲ್ಲ. ನಿಮ್ಮ ಕರ ಪತ್ರಗಳನ್ನು ಹಿಡಿದುಕೊಂಡು ವಾಪಸ್ ಹೋಗಿ ಎಂದು ವಾಗ್ವಾದ ನಡೆಸಿದರು. ಬಳಿಕ ಗೋಬ್ಯಾಕ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಬಿಜೆಪಿಗರ ತಂಡವನ್ನು ಓಡಿಸಿದರು.

ಬಿಜೆಪಿಗರು ಹಾಗೂ ಮುಸ್ಲಿಮರ ಮಧ್ಯೆ ಮಾತಿಗೆ ಮಾತು ಬೆಳೆದು ಕೆಲ ಹೊತ್ತು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

Comments

Leave a Reply

Your email address will not be published. Required fields are marked *