‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಔಷಧಿ ವ್ಯವಸ್ಥೆ

ಚಿಕ್ಕಬಳ್ಳಾಪುರ: ‘ಮನೆಯೇ’ ಮಂತ್ರಾಲಯಕ್ಕೆ ಕರೆ ಮಾಡಿ ಮಾತ್ರೆಗಳಿಗಾಗಿ ಮನವಿ ಮಾಡಿಕೊಂಡಿದ್ದ ಚಿಕ್ಕಬಳ್ಳಾಪುರದ ಕಂದವಾರ ನಿವಾಸಿ ಅಮರ್ ಗೆ ಔಷಧಿಯ ವ್ಯವಸ್ಥೆಯನ್ನ ಮಾಡಲಾಗಿದೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋ 32 ವರ್ಷದ ಅಮರ್ ಗೆ 65 ವರ್ಷದ ತಾಯಿ ಮಾತ್ರ ಇದ್ದು ಇಬ್ಬರು ದುಡಿಯುವ ಪರಿಸ್ಥಿತಿಯಲ್ಲಿಲ್ಲ. ಇಷ್ಟು ದಿನ ಸಂಕಷ್ಟಕ್ಕೆ ಸ್ನೇಹಿತರು, ಪರಿಚಯಸ್ಥರು ಸ್ಪಂದಿಸಿ ಮಾತ್ರೆಗಳನ್ನ ಕೊಡಿಸಿ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಲಾಕ್ ಡೌನ್ ಆದ ಬಳಿಕ ಸ್ನೇಹಿತರಿಗೂ ಸಹಾಯ ಮಾಡೋಕೆ ಕಷ್ಟವಾಗಿತ್ತು. ಹೀಗಾಗಿ ದಿನಕ್ಕೆ ಎರಡು ಮೂರು ಬಾರಿ ತೆಗೆದುಕೊಳ್ಳಬೇಕಿದ್ದ ಮಾತ್ರೆ ಒಂದು ಬಾರಿ ತೆಗೆದುಕೊಂಡು ಸುಮ್ಮನಾಗುತ್ತಿದ್ದ.

ಮಾತ್ರೆಗಳಿಲ್ಲದೆ ಪರಿತಪಿಸುತ್ತಿದ್ದ ಅಮರ್ ‘ಮನೆಯೇ’ ಮಂತ್ರಾಲಯಕ್ಕೆ ಕರೆ ಮಾಡಿ ಮಾತ್ರೆಗಳಿಗಾಗಿ ಮನವಿ ಮಾಡಿಕೊಂಡಿದ್ದ. ಅಮರ್ ಸಂಕಷ್ಟಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ವೀಕ್ಷಕರು ಖುದ್ದು ತಾವೇ ಸ್ವಯಂಪ್ರೇರಿತವಾಗಿ ಅಮರ್ ಗೆ ಮಾತ್ರೆಗಳನ್ನ ಕೊಡಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಬಳಿಯ ಟೀಚರ್ಸ್ ಲೇಔಟ್ ನಿವಾಸಿ ಶಿಕ್ಷಕಿ ನಾಗರತ್ಮಮ್ಮ ಹಾಗೂ ಅವರ ಅಕ್ಕ ಪಕ್ಕದ ಮಹಿಳೆಯರೇ ಸೇರಿ ಒಂದು ತಿಂಗಳಿಗೆ ಬೇಕಾಗುವಷ್ಟು 2,709 ರೂ. ಮೌಲ್ಯದ ಮಾತ್ರೆಗಳನ್ನ ಕೊಡಿಸಿ ಮಾನವೀಯತೆ ಮರೆದಿದ್ದಾರೆ. ಇದಲ್ಲದೆ ನಗರದ ಕಂದವಾರ ಪೇಟೆಯ ದಿನಸಿ ಅಂಗಡಿ ಮಾಲೀಕರಾದ ಶಶಿ ಯವರು ದಿನಸಿ ಪದಾರ್ಥಗಳನ್ನ ಕೊಟ್ಟು ಸಹಾಯ ಮಾಡಿದ್ದಾರೆ.

ಕಾರ್ತಿಕ್ ಎಂಬ ಯುವಕ ಇವರ ಮನೆ ಪರಿಸ್ಥಿತಿ ನೋಡಿ 500 ರೂಪಾಯಿ ಧನಸಹಾಯ ಮಾಡಿದ್ದಾರೆ. ಇನ್ನು ಯುವಕನ ಪರಿಸ್ಥಿತಿ ಮಾಹಿತಿ ಅರಿತ ಬಿಜೆಪಿ ಪಕ್ಷದ ಯುವಾಬ್ರಿಗೇಡ್ ನಿಂದಲೂ ಸಹ ಮಾತ್ರೆಗಳನ್ನ ಖರೀದಿಸಿ ಅಮರ್ ಗೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *