ಜಮೀನಿನಲ್ಲಿ ಪೈಪ್‍ಲೈನ್ ಗುಂಡಿ ತೆಗೆಸಲು ಹೋಗಿದ್ದ ಯುವಕ ಸಾವು

ಮಂಡ್ಯ: ಜಮೀನಿನಲ್ಲಿ ಪೈಪ್ ಲೈನ್ ಗುಂಡಿ ತೆಗೆಸುವ ವೇಳೆ ಮಣ್ಣು ಕುಸಿದು ಯುವಕ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಲ್ಲೇನಹಳ್ಳಿ ಗ್ರಾಮ ಹನುಮಂತು ಅವರ ಮಗ ಪವನ್(24) ಮೃತ ದುರ್ದೈವಿ. ಪವನ್ ತಮ್ಮ ಜಮೀನಿನಲ್ಲಿ ಪೈಪ್ ಲೈನ್ ಗುಂಡಿ ತೆಗೆಸಲು ಹೋಗಿದ್ದನು. ಈ ವೇಳೆ ಪೈಪ್ ಲೈನ್ ತೆಗೆಯುತ್ತಿದ್ದ ಗುಂಡಿ ಪಕ್ಕ ಮಣ್ಣು ಕುಸಿದಿದೆ. ಆಗ ಗುಂಡಿ ಹತ್ತಿರ ನಿಂತಿದ್ದ ಪವನ್ ಗುಂಡಿ ಒಳಗೆ ಜಾರಿ ಬಿದ್ದಿದ್ದು, ಆತನ ಮೇಲೆ ಮತ್ತೆ ಮಣ್ಣು ಕುಸಿದಿದೆ.

ಈ ವೇಳೆ ಸ್ಥಳದಲ್ಲಿ ಇದ್ದವರು ಮಣ್ಣನ್ನು ಮೇಲೆ ಎತ್ತಿ ಪವನ್‍ನನ್ನು ಹೊರಗೆ ತೆಗೆದು ತಕ್ಷಣ ಆತನನ್ನು ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪರಿಶೀಲನೆ ಮಾಡಿದಾಗ ಪವನ್ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *