ಮಂಡ್ಯ To ಇಂಡಿಯಾ ಉದ್ಯೋಗ ಮೇಳ ಯಶಸ್ವಿ – 1,100 ಮಂದಿಗೆ ಉದ್ಯೋಗ

ರಾಮನಗರ/ಮಂಡ್ಯ: ಮಂಡ್ಯ ಟು ಇಂಡಿಯಾ (Mandya To India) ಧ್ಯೇಯದೊಂದಿಗೆ ನಡೆದ ಬೃಹತ್ ಉದ್ಯೋಗ ಮೇಳಕ್ಕೆ (Job Fair) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ ಕಳೆದುಕೊಂಡ ಯುವತಿ, ಎರಡೂ ಕಣ್ಣು ಕಾಣದ ಯುವಕ ಸೇರಿ ಸಾವಿರಾರು ಯುವಕರ ಬದುಕಿಗೆ ಉದ್ಯೋಗ ಮೇಳ ಬೆಳಕಾಗಿದೆ. ಇದೇ ವೇಳೆ ಕುಮಾರಸ್ವಾಮಿಯವರು (HD Kumaraswamy) ಮತ್ತೊಂದು ಭರವಸೆ ನೀಡಿದ್ದು, ಮಂಡ್ಯ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಂಡ್ಯದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೆಚ್‌ಡಿಕೆ ಪಣ ತೊಟ್ಟಿದ್ದಾರೆ. ಮಂಡ್ಯ ಟು ಇಂಡಿಯಾ ಧ್ಯೇಯದೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಗೂ ಇಂದು (ಶನಿವಾರ) ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಬರೋಬ್ಬರಿ 1,100 ಮಂದಿಗೆ ಕೆಲಸ ಸಿಕ್ಕಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರಿಂದಲೇ ನೇಮಕಾತಿ ಪತ್ರ ಪಡೆದ ಯುವಕ, ಯುವತಿಯರು ಕುಮಾರಸ್ವಾಮಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ಭಾರತ ಎಲ್ಲರಿಗಿಂತ ಮೊದಲು 6G ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಿದೆ: ಪಿಯೂಷ್ ಗೋಯಲ್

ಉದ್ಯೋಗ ಮೇಳದಲ್ಲಿ ಬಿಇಎಮ್‌ಎಲ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ, ಇನ್ಫೋಸಿಸ್, ಹೆಚ್ಎ‌ಎಲ್, ಟೊಯೋಟಾ, ಇಂಡಿಯನ್ ಆರ್ಮಿ, ನೇವಿ, ಏರ್ ಫೋರ್ಸ್, ಹೋಂಡೈ, ಬಜಾಜ್, ಎನ್‌ಎಸ್‌ಐಎಲ್, ಟಿವಿಎಸ್ ಸೇರಿದಂತೆ 159 ಕಂಪನಿಗಳು ಭಾಗಿಯಾಗಿದ್ದವು. ಮಂಡ್ಯ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಹಲವೆಡೆಯಿಂದ 5 ಸಾವಿರಕ್ಕೂ ಅಧಿಕ ಯುವಕ ಹಾಗೂ ಯುವತಿಯರು ಉದ್ಯೋಗ ಅರಸಿ ಬಂದಿದ್ದರು. ಈ ಪೈಕಿ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ ಕಳೆದುಕೊಂಡ ಕೃತಿಕಾ ಎಂಬಾಕೆಗೆ ಬಿಹೆಚ್‌ಇಎಲ್ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು, ಎರಡೂ ಕಣ್ಣು ಕಾಣದ ಅಜೇಯ್ ಕುಮಾರ್ ಎಂಬಾತನಿಗೂ ಉದ್ಯೋಗ ದೊರಕಿದೆ. ಕುಮಾರಸ್ವಾಮಿ ಅವರೇ ನೇಮಕಾತಿ ಪತ್ರ ನೀಡುವ ಜೊತೆಗೆ ಆತ್ಮಸ್ಥೈರ್ಯ ತುಂಬಿದರು. ಅವಳಿ ಸಹೋದರಿಯರಾದ ನವ್ಯ ಹಾಗೂ ನಂದಿತಾ ಟಾಟಾ ಮೋಟರ್ಸ್ ಕಂಪನಿಗೆ ನೇಮಕಗೊಂಡಿದ್ದಾರೆ. ಇನ್ನು ಉದ್ಯೋಗ ಮೇಳದಲ್ಲಿ ಕೆಲಸ ಗಿಟ್ಟಿಸಿಕೊಂಡ ಯುವಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಇದನ್ನೂ ಓದಿ: ಮುಡಾದಲ್ಲಿ ಸಹಕರಿಸಿದ್ದಕ್ಕೆ ಕುಮಾರ್ ನಾಯಕ್‌‌ಗೆ MP ಟಿಕೆಟ್: ವಿಜಯೇಂದ್ರ

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಅಂತ್ಯ ಅಲ್ಲ ಆರಂಭ. ಸದ್ಯ 1,100 ಮಂದಿಗೆ ನೇಮಕಾತಿ ಪತ್ರ ನೀಡಲಾಗಿದೆ. ಮೇಳದಲ್ಲಿ ನೋಂದಣಿ ಮಾಡಿಕೊಂಡಿರುವ ಎಲ್ಲರಿಗೂ ಹಂತ ಹಂತವಾಗಿ ಮೂರು ತಿಂಗಳ ಒಳಗಾಗಿ ಕೆಲಸ ಕೊಡಿಸಲಾಗುವುದು. ಮುಂದಿನ ದಿನಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಮಂಡ್ಯಕ್ಕೆ ತರುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯ ಭರವಸೆ ನೀಡಿದರು. ಇದನ್ನೂ ಓದಿ: ಜಾತಿ ಜನಗಣತಿ ವರದಿ ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ: ಪ್ರದೀಪ್ ಈಶ್ವರ್

ಒಟ್ಟಾರೆ ಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದು, ತಮ್ಮ ಕೆಲಸದ ಮೂಲಕವೇ ರಾಜಕೀಯ ವಿರೋಧಿಗಳಿಗೆ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ