ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ

ಮಂಡ್ಯ: ಸಂಸದೆಯಾದ ಬಳಿಕ ಸುಮಲತಾ ಅವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿ ಹಾರ, ಶಾಲು, ಪೇಟ ತೊಡಿಸಬೇಡಿ. ಬದಲಾಗಿ ಗಿಡ ನೆಡಿ ಎಂದು ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ ಎಂದರು.

ಹೋದ ಕಡೆಯೆಲ್ಲಾ ನನಗೆ ಜನ ಪ್ರೀತಿಯಿಂದ ಹೂವಿನ ಹಾರ, ಶಾಲು, ಪೇಟ ತೆಗೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ. ಈ ಮೂಲಕ ಅವರು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

ದುಡ್ಡು ವೇಸ್ಟ್ ಆಗಬಾರದು, ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವೆಂದಲ್ಲಿ ಬಡವರಿಗೆ ಒಂದುಷ್ಟು ಏನಾದರೂ ಕೊಡುವುದಾದರೆ ಕೊಡಲಿ. ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡದಂತೆ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಲ್ಲಿ ಸಂತ್ರಸ್ತರಿದ್ದಾರೆ. ಅವರಿಗೆ ಸಹಾಯ ಮಾಡಲಿ. ಬರುವ ವಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇನೆ. ಒಟ್ಟಿನಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುದನ್ನು ಒದೇ ವೇಳೆ ಮಂಡ್ಯ ಯುವಕರಲ್ಲಿ ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *