ರೈತರಿಗೆ ಕೆಆರ್ ಎಸ್ ನೀರು ಬಿಡದೇ ಅಧಿಕಾರಿ ಆಟ – ಬಸವರಾಜೇಗೌಡ ವಿರುದ್ಧ ಮಂಡ್ಯ ಶಾಸಕರಿಂದ ದೂರು

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶ ನೀಡಿದರೂ ಕೆಆರ್ ಎಸ್‍ನಿಂದ ರೈತರ ಕಾಲುವೆಗಳಿಗೆ ನೀರು ಬಿಡದ ಅಧಿಕಾರಿ ಬಸವರಾಜೇಗೌಡ ವಿರುದ್ಧ ಮಂಡ್ಯ ಶಾಸಕರು ದೂರು ನೀಡಿದ್ದಾರೆ.

ರೈತರಿಗೆ ಸರಿಯಾದ ಸಮಯಕ್ಕೆ ನೀರು ಬಿಡುತ್ತಿಲ್ಲ. ನಿಮ್ಮ ಆದೇಶವನ್ನ ಅಧಿಕಾರಿ ಪಾಲನೆ ಮಾಡುತ್ತಿಲ್ಲ. ಹೀಗೆ ಆದರೆ ರೈತರಿಗೆ ನಾವೇನು ಉತ್ತರ ಕೊಡೋದು ಎಂದು ಬುಧವಾರ ನಡೆದ ಸಭೆಯಲ್ಲಿ ಶಾಸಕರು ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ.

ಶಾಸಕರ ದೂರಿನ ಮೇಲೆ ಸಭೆಯಲ್ಲೇ ಸಿಎಂ ಕುಮಾರಸ್ವಾಮಿ ಅಧಿಕಾರಿ ಬಸವರಾಜೇಗೌಡಗೆ ಕರೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ಅವರಿಗೆ ಸಚಿವ ಪುಟ್ಟರಾಜ ನೀರು ಬಿಡದಂತೆ ಹೇಳಿದ್ದಾರೆ ಅಂತಾ ಅಧಿಕಾರಿ ತಪ್ಪು ಮಾಹಿತಿ ನೀಡಿದ್ದಾರೆ. ಬಳಿಕ ಸಿಎಂ ಸಚಿವರಿಗೆ ಕರೆ ಮಾಡಿದ್ದಾರೆ. ಆಗ ಸಚಿವ ಪುಟ್ಟರಾಜು ಅವರು, ನಾನು ಹಾಗೇ ಹೇಳಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ತಪ್ಪು ಮಾಹಿತಿ ನೀಡಿದ ಬಸವರಾಜೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸಿಎಂ ಕುಮಾರಸ್ವಾಮಿ ಅವರು ಕೆಆರ್ ಎಸ್ ನಲ್ಲಿ ಎಷ್ಟು ನೀರಿದೆ ಅನ್ನೋ ಮಾಹಿತಿ ಕೇಳಿದ್ದಾರೆ. ಆದರೆ ಈ ಪ್ರಶ್ನೆಗೂ ಬಸವರಾಜೇಗೌಡ ಸರಿಯಾಗಿ ಉತ್ತರಿಸದೇ ತಪ್ಪು ಮಾಹಿತಿ ನೀಡಿದ್ದಾರೆ. ಬಳಿಕ ನಾಳೆ ಮಾಹಿತಿ ನೀಡುವುದಾಗಿ ಸಿಎಂಗೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಸಿಎಂ, ನಾನು ಹೇಳಿದಂತೆ ಮಾಡಿ ಅಂತ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿ ವಿರುದ್ಧ ಸಿಎಂ ಕ್ರಮ ತೆಗೆದು ಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *