ನನ್ನ ಮಗನಂತೆ ನಿಖಿಲ್ ಎಂದಿದ್ದ ಚಲುವರಾಯಸ್ವಾಮಿ ಇಂದು ಮಾತಾಡಲೇ ಇಲ್ಲ

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನನ್ನ ಮಗನಿದ್ದಂತೆ ಎಂದು ಹೇಳಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಇಂದು ಎದುರು ಬದುರಾದರೂ ಒಬ್ಬರಿಗೊಬ್ಬರು ಮಾತನಾಡಿಸಲೇ ಇಲ್ಲ.

ಲೋಕಸಭಾ ಚುನಾವಣೆ ವೇಳೆ ಬದ್ಧವೈರಿಗಳಾಗಿ ಬದಲಾಗಿರುವ ನಿಖಿಲ್ ಮತ್ತು ಚಲುವರಾಯಸ್ವಾಮಿ ಇಂದು ಕೆ.ಆರ್ ಪೇಟೆ ಮಿನಿ ವಿಧಾನಸೌಧದಲ್ಲಿ ಮುಖಾಮುಖಿ ಆದರು. ಕಾರಿಡಾರ್ ನಲ್ಲಿ ಇಬ್ಬರೂ ಇದ್ದರು. ಚಲುವರಾಯಸ್ವಾಮಿ ನಡೆದುಕೊಂಡು ಬರುತ್ತಿದ್ದರೆ, ನಿಖಿಲ್ ಆ ಕಡೆ ಮುಖ ತಿರುಗಿಸಿದರು. ಚಲುವರಾಯಸ್ವಾಮಿಯೂ ಮಾತಾಡಿಸಲು ಹೋಗಲಿಲ್ಲ. ಈ ಮೂಲಕ ವೈರತ್ವ ಕಡಿಮೆ ಆಗಿಲ್ಲ ಅನ್ನೋದನ್ನ ಸಾಬೀತುಪಡಿಸಿದ್ರು.

ನಿಖಿಲ್ ಮಗನಿದ್ದಂತೆ:
ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡರ ಬಳಿಕ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೆ.ಆರ್ ಪೇಟೆ ಉಪಚುನಾವಣೆ ಹೊಸ್ತಿಲಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಪರಾಮರ್ಶೆ ಮಾಡಿದ್ದರು.

ನಿಖಿಲ್ ಒಳ್ಳೆಯ ಹುಡುಗ. ರಾಜಕಾರಣ ಮಾಡುವುದಕ್ಕೆ ಇನ್ನೂ ಸಮಯ ಇತ್ತು. ದೊಡ್ಡದಾಗಿ ಮೀಸೆ ತಿರುಗಿಸಿ ಕರೆತಂದು ಸೋಲಿಸಿದರು. ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡುಕೊಳ್ಳುತ್ತಿದ್ದರು. ಅವರನ್ನು ಕರೆತಂದು ಸೋಲಿಸಿದರು. ಸಿ.ಎಸ್ ಪುಟ್ಟರಾಜು ಅವರೇ ಚುನಾವಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಸೋಲಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರಣ ಎಂದು ಆರೋಪಿಸಿದ್ದರು.

ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್ ಜೊತೆಗೂ ವೈರತ್ವ ಕಟ್ಟಿಕೊಳ್ಳೋದಕ್ಕೆ ಆಗುತ್ತಾ. ಅವನೂ ನನ್ನ ಮಗ ಇದ್ದಂಗೆ. ಸಿ.ಎಸ್ ಪುಟ್ಟರಾಜು ಮಂಡ್ಯ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ. ರಾಜ್ಯಕ್ಕೆ ದೇವೇಗೌಡರು ಇದ್ದಂತೆ ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಿಲ್ವಾ? ಹಾಗೆ ನಾರಾಯಣಗೌಡರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *