ಜೆಡಿಎಸ್ ಮುಖಂಡನ ಕಗ್ಗೊಲೆ- 7 ಮಂದಿ ವಿರುದ್ಧ ಎಫ್‍ಐಆರ್

ಮಂಡ್ಯ: ಜೆಡಿಎಸ್ ಮುಖಂಡನ ಕೊಲೆಯಿಂದ ಉದ್ವಿಗ್ನಗೊಂಡಿದ್ದ ಮದ್ದೂರು ಈಗ ಬೂದಿ ಮುಚ್ಚಿದ ಕೆಂಡದಂತಿದೆ. ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಸಂಬಂಧ ಮದ್ದೂರು ಪೊಲೀಸರು ಏಳು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 143(ಅಕ್ರಮ ಕೂಟ), 146(ದೊಂಬಿ), 148(ಮಾರಕಾಸ್ತ್ರದಿಂದ ಹಲ್ಲೆ), 341(ಅಕ್ರಮವಾಗಿ ಕೂಡಿ ಹಾಕುವುದು), 307 (ಕೊಲೆ ಯತ್ನ), 302(ಕೊಲೆಗೆ ದಂಡನೆ), 120 ಬಿ(ಕ್ರಿಮಿನಲ್ ಪಿತೂರಿ), 114 (ಅಪರಾಧ ನಡೆದಾಗ ದುಷ್ಪ್ರೇರಕ ಹಾಜರಿ) ಇವುಗಳ ಅಡಿ ತೊಪ್ಪನಹಳ್ಳಿಯ ಪ್ರಸನ್ನ, ಸ್ವಾಮಿ, ಮುತ್ತೇಶ್, ಶಿವರಾಜು, ಯೋಗೇಶ್ ಹೇಮಂತ್ ಹಾಗೂ ಇತರರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಕಾರ್‍ನಲ್ಲಿ ಮೃತ ಪ್ರಕಾಶ್ ಜೊತೆ ಇದ್ದ ತೊಪ್ಪನಹಳ್ಳಿಯ ಅಭಿಲಾಷ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಕಾಶ್ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಪ್ರಕಾಶ್ ಮೃತದೇಹ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಬೆಳಗ್ಗೆ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಇನ್ನು ತೊಪ್ಪನಹಳ್ಳಿಗೆ ಸಿಎಂ ಆಗಮಿಸಲಿದ್ದು, ಪ್ರಕಾಶ್ ಅಂತಿಮ ದರ್ಶನ ಪಡೆಯಲಿದ್ದಾರೆ.

ಜಿಲ್ಲೆಯ ಮದ್ದೂರಿನ ಟಿಬಿ ಸರ್ಕಲ್ ಬಳಿ ಮಾಜಿ ಪಂಚಾಯತ್ ಅಧ್ಯಕ್ಷೆಯ ಪತಿ ಹಾಗೂ ಜೆಡಿಎಸ್ ಮುಖಂಡ ಹೊನ್ನಲಗೆರೆ ಪ್ರಕಾಶ್ (50) ಎಂಬವರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ಮದ್ದೂರು ಪಟ್ಟಣದ ಟಿಬಿ ಸರ್ಕಲ್ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನಲ್ಲಿ ಕುಳಿತಿದ್ದ ಪ್ರಕಾಶ್‍ರನ್ನು ಕತ್ತು ಸೀಳಿ ಪರಾರಿಯಾಗಿದ್ದಾರೆ. ತೀವ್ರವಾಗಿ ಮಾರಕಾಸ್ತ್ರಗಳಿಂದ ದಾಳಿಗೊಳಗಾಗಿದ್ದ ಕಾರಿನಲ್ಲೇ ಮೃತಪಟ್ಟಿದ್ದರು.

ಪ್ರಕಾಶ್ ಹತ್ಯೆಯಾದ ಸುದ್ದಿ ಹಬ್ಬುತ್ತಲೇ, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ಜೆಡಿಎಸ್ ಕಾರ್ಯಕರ್ತರು ಬೆಂಗಳೂರು, ಮೈಸೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರು.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *