ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಕಿರುಕುಳ- ದಯಾಮರಣಕ್ಕೆ ರೈತ ಕುಟುಂಬ ಮನವಿ

ಮಂಡ್ಯ: ಕಳೆದ 60 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಗದ್ದೆ ತಮಗೆ ಬರಬೇಕೆಂದು ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಕುಟುಂಬವೊಂದು ದಯಾಮರಣ ನೀಡಿ ಎಂದು ಅಸಹಾಯಕತೆ ಹೊರಹಾಕುತ್ತಿದೆ.

ಈ ಘಟನೆ ಮಂಡ್ಯದ ಕೀಲಾರ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಮೂರ್ತಿ ಎಂಬವರಿಗೆ ಸೇರಿದ 20 ಗುಂಟೆ ಗದ್ದೆಯ ಪಕ್ಕದಲ್ಲೇ ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಅವರ ಗದ್ದೆಯಿದೆ. ಇದೀಗ ಮೋಟಮ್ಮ ಅವರ ಪತಿ ವೆಂಕಟರಾಮು ಅವರು, ಅವರ ಗದ್ದೆಯ ಪಕ್ಕದಲ್ಲಿರುವ ನಮ್ಮ ಗದ್ದೆಯ ಮೇಲೆ ಕಣ್ಣು ಹಾಕಿ, ಗದ್ದೆಯನ್ನು ಊಳಲು ಬಿಡುತ್ತಿಲ್ಲ ಅಂತ ರೈತ ಆರೋಪಿಸುತ್ತಿದ್ದಾರೆ.

ಕೀಲಾರ ಗ್ರಾಮದ ಸರ್ವೆ ನಂಬರ್ 357 ಮತ್ತು 358 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಬರುವ 20 ಗುಂಟೆ ಗದ್ದೆಯನ್ನು ಕಳೆದ 60 ವರ್ಷಗಳಿಂದ ನಾವೇ ಊಳುತ್ತಿದ್ದೇವೆ. ಈ ಜಮೀನು ಸರ್ಕಾರದಿಂದ ನಮಗೆ ಕೊಡುಗೆಯಾಗಿ ಬಂದಿದೆ. ಆದ್ರೆ ಈಗ ಏಕಾಏಕಿ ಮೋಟಮ್ಮ ಪತಿ ವೆಂಕಟರಾಮು ಮತ್ತು ಜೊತೆಯವರು ಸೇರಿಕೊಂಡು ಗದ್ದೆಯಲ್ಲಿ ನಾಟಿ ಮಾಡಲು ಬಿಡುತ್ತಿಲ್ಲ. ಸುತ್ತಮುತ್ತ ಎಲ್ಲರ ಗದ್ದೆಯೂ ನಾಟಿ ಮಾಡಿಯಾಗಿದೆ. ಆದ್ರೆ ನಮ್ಮ ಗದ್ದೆ ಮಾತ್ರ ನಾಟಿ ಕೆಲಸ ಆಗದೇ ಹಾಗೇ ಉಳಿದಿದೆ ಎಂದು ನಾಗರಾಜು ಮತ್ತು ಮೂರ್ತಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ನಾಗರಾಜು, ಮೂರ್ತಿ ಹಾಗೂ ಮೋಟಮ್ಮ ಪತಿ ವೆಂಕಟರಾಮು ಎಲ್ಲರೂ ಸಂಬಂಧಿಕರೇ ಆಗಿದ್ದು ಹಳೇ ವೈಷಮ್ಯದಿಂದ ಗಲಾಟೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿರುವ ನಾಗರಾಜು, ನಾನು ನಿವೃತ್ತ ಎಸ್‍ಐ ಆಗಿದ್ರು ಮಾಜಿ ಸಚಿವರ ಕುಟುಂಬದ ದೌರ್ಜನ್ಯ ಎದುರಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ಹೊರಹಾಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *