ತರಿಕೇರೆಯಲ್ಲಿ ಸ್ಕೂಟಿ ಸಮೇತ ಕೊಚ್ಚಿ ಹೋದ ವ್ಯಕ್ತಿ – 100 ಮೀಟರ್ ದೂರದಲ್ಲಿ ಶವ ಪತ್ತೆ

ಚಿಕ್ಕಮಗಳೂರು: ಕಿರು ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಸ್ಕೂಟಿ ಸಮೇತ ವ್ಯಕ್ತಿಯೊಬ್ಬರು  ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಹುಲಿತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಪೊನ್ನಸ್ವಾಮಿ(45) ಮೃತಪಟ್ಟ ವ್ಯಕ್ತಿ. ಪೊನ್ನಸ್ವಾಮಿ ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಿರು ಸೇತುವೆ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳಿಯರ ನಿರಂತರ ಹುಡುಕಾಟದಿಂದ ಕೊಚ್ಚಿ ಹೋದ ಜಾಗದಿಂದ ಸುಮಾರು 100 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ನೀರಗಂಡಿ ಬಳಿ ಭಾರಿ ಮಳೆಗೆ ದಾರಿ ಕಾಣದೇ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಾಲ್ವರು ಯುವಕರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಹಾಸನದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಭರತ್ ಎಂಬುವವರಿಗೆ ಸೇರಿದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಈ ಅಪಘಾತ ನಡೆದಿದ್ದು, ಇದೇ ಸ್ಥಳದಲ್ಲಿ ಪದೇ-ಪದೇ ಅಪಘಾತಗಳು ಸಂಭವಿಸುತ್ತಿವೆ. ವಾರಕ್ಕೆ ಎರಡರಿಂದ ಮೂರು ಅಪಘಾತಗಳು ಇದೇ ಸ್ಥಳದಲ್ಲಿ ಸಂಭವಿಸಿದರೂ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಜನಸಾಮಾನ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *