ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ!

ಆನೇಕಲ್: ಬಡ್ಡಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

ನಾರಾಯಣಸ್ವಾಮಿ (32) ಹಲ್ಲೆಗೊಳಗಾದ ವ್ಯಕ್ತಿ. ಹೊಸಕೋಟೆಯ ಕೆ ಮುತ್ಸಂದ್ರ ಗ್ರಾಮದ ನಿವಾಸಿ ನಾರಾಯಣಸ್ವಾಮಿಯನ್ನು ಕುಂಬಳಹಳ್ಳಿ ಗ್ರಾಮದ ನಿವಾಸಿಗಳಾದ ಪ್ರಕಾಶ್, ಶಶಿ ಹಾಗೂ ಇಬ್ಬರು ಸಹಚರರು ನಿನ್ನೆ ರಾತ್ರಿ 10 ಕ್ಕೆ ಮುತ್ಸಂದ್ರ ಗ್ರಾಮದ ಗೇಟ್‍ನ ಹೋಟೆಲ್ ಬಳಿ ಹಲ್ಲೆ ನಡೆಸಿ ಅಲ್ಟೋ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ.

ನಂತರ ಬೆಂಗಳೂರು ಪೂರ್ವ ತಾಲೂಕಿನ ಕಾಡುಗೋಡಿ ಸಮೀಪದ ಬನಹಳ್ಳಿ ಬಳಿ ಕರೆ ತಂದು ಕೊಲೆ ಮಾಡಲು ಯತ್ನಿಸಿದಾಗ ಸಿನಿಮಾದ ರೀತಿಯಲ್ಲಿ ಅಪಹರಣಕಾರರಿಂದ ನಾರಾಯಣಸ್ವಾಮಿ ತಪ್ಪಿಸಿಕೊಂಡು ಬಂದಿದ್ದಾರೆ. ಬಳಿಕ ಖಾಸಗಿ ಶಾಲೆಯೊಂದರ ಸೆಕ್ಯೂರಿಟಿ ಗಾರ್ಡ್ ಮೊಬೈಲ್ ನಿಂದ ತಮ್ಮ ಅಣ್ಣನಿಗೆ ಕಾಲ್ ಮಾಡಿ ಕರೆಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *