ಬೆಂಗಳೂರು: ಬಿಯರ್ ಬಾಟಲ್ ನಿಂದ ಯುವಕನ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ನಗರದ ಯಶವಂತಪುರದ ಮತ್ತಿಕೆರೆಯ ಎಲ್ ಸಿ ಆರ್ ರಸ್ತೆಯಲ್ಲಿ ನಡೆದಿದೆ.
ಉತ್ತರಾಖಂಡ್ ಮೂಲದ ಜಗದೀಪ್ ಸಿಂಗ್(21) ಮೃತ ದುರ್ದೈವಿ. ಜಗದೀಪ್ ರಾತ್ರಿ 12 ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಹೋಟೆಲ್ಗೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ಜಗದೀಪ್ ಸ್ನೇಹಿತನಾದ ಸುಹಾಸ್ ಜೊತೆ ಇಬ್ಬರು ಯುವತಿಯರು ಕೂಡಾ ಊಟಕ್ಕೆ ಹೋಗಿದ್ದರು. ಈ ನಡುವೆ ಕುಡಿದು ಮೂವರು ಸ್ಥಳೀಯ ಯುವಕರು ಯುವತಿಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇದರಿಂದಾಗಿ ಕೋಪಗೊಂಡು ಜಗದೀಪ್ ಪುಂಡ ಯುವಕರನ್ನು ಬೈದಿದ್ದಾನೆ.

ಮೊದಲೇ ಕುಡಿದು ತೂರಾಡುತ್ತಿದ್ದ ಪುಂಡರು ಜಗದೀಪ್ ಹಾಗೂ ಸುಹಾಸ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಜಗದೀಪ್ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಹಾಸ್ ಕತ್ತು ಹಾಗೂ ತಲೆ ಭಾಗದಲ್ಲಿ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಉತ್ತರಾಖಂಡ್ ಮೂಲದ ಜಗದೀಪ್ ಹಾಗೂ ಉಡುಪಿ ಮೂಲದ ಸುಹಾಸ್ ಮತ್ತಿಕೆರೆ ಬಳಿಯ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply