ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಹೈದರಾಬಾದ್‍ನ ಸಂಜೀವರೆಡ್ಡಿ ನಗರದ ತುಳಸಿ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ ಈ ಘಟನೆ ಡಿಸೆಂಬರ್ 31ರಂದು ನಡೆದಿದೆ. ಆರೋಪಿ ಹ್ಯಾರಿ ತುಳಸಿ ನಗರದಲ್ಲಿನ ತನ್ನ ಅತ್ತೆಯ ಮನೆಗೆ ಕಳ್ಳನ ವೇಷದಲ್ಲಿ ನುಗ್ಗಿದ್ದಾನೆ. ನಂತರ ನಿದ್ದೆ ಮಾಡುತ್ತಿದ್ದ ತನ್ನ ಅತ್ತೆ ಅಂಟೋನಮ್ಮ ಅವರನ್ನ ಥಳಿಸಿದ್ದಾನೆ. ಇದನ್ನ ಅವರು ತಡೆಯಲು ಯತ್ನಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ನಂತರ ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಅಂಟೋನಮ್ಮ ಮರುದಿನ ಬೆಳಗ್ಗೆ ಎಸ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಪೊಲೀಸರು ಹ್ಯಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹ್ಯಾರಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *