15 ಜನರ ಪ್ರಾಣ ಹೋಗುತ್ತೆ ಹುಷಾರ್- ಜ್ಯೋತಿಷಿ ಮಾತಿಗೆ ಹೆದರಿ 1 ತಾಸು ತಡವಾಗಿ ಬಸ್ ಹೊರತೆಗೆದ ಬಿಎಂಟಿಸಿ ಡ್ರೈವರ್!

ಬೆಂಗಳೂರು: ಯಾವುದಾದರೂ ಕಾರ್ಯಕ್ರಮ ಉದ್ಘಾಟನೆ, ಶುಭ ಕಾರ್ಯದ ವೇಳೆ ಸಮಯವನ್ನು ನೋಡುವುದು ಎಲ್ಲರಿಗೂ ಗೊತ್ತೆ ಇದೆ. ಆದರೆ ನಗರದ ಬಿಎಂಟಿಸಿ ಚಾಲಕರೊಬ್ಬರು ಜ್ಯೋತಿಷಿಯ ಸಲಹೆ ಮೇರೆಗೆ ಶುಭ ಸಮಯವನ್ನು ನೋಡಿ ಬಸ್ಸನ್ನು ಡಿಪೋದಿಂದ ತೆಗೆದು ಸುದ್ದಿಯಾಗಿದ್ದಾರೆ.

ಹೌದು. 15 ಜನರ ಪ್ರಾಣ ಹೋಗುತ್ತೆ ಹುಷಾರ್ ಎಂದು ಜ್ಯೋತಿಷಿಯೊಬ್ಬ ಹೇಳಿದ್ದಕ್ಕೆ ಬಿಎಂಟಿಸಿ ಚಾಲಕ ಒಂದು ತಾಸು ತಡವಾಗಿ ಬಸ್ ಅನ್ನು ಡಿಪೋದಿಂದ ತೆಗೆದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 1 ರಂದು ಪೂರ್ಣ ಪ್ರಜ್ಞಾ ಲೇಔಟ್ ನ ಡಿಪೋ 33ರಲ್ಲಿ ಬಸ್ ಮೆಜೆಸ್ಟಿಕ್ ಟು ಚನ್ನಮ್ಮಕೆರೆ ಅಚ್ಚುಕಟ್ಟುಗೆ ಸಂಚರಿಸಬೇಕಿತ್ತು. ಬೆಳಗ್ಗೆ 6.15ಕ್ಕೆ ಬಸ್ ಹೊರಡಬೇಕಿತ್ತು. ಆದರೆ 7.35ಕ್ಕೆ ಬಸ್ ಡಿಪೋದಿಂದ ಹೊರಟಿದೆ. ಒಂದು ಗಂಟೆ ಬಸ್ ತಡವಾಗಿ ಹೊರಟ್ಟಿದ್ದಕ್ಕೆ ಡಿಪೋ ಮ್ಯಾನೇಜರ್ ಡ್ರೈವರ್ ಯೋಗೇಶ್ ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಗೆ ಚಾಲಕ ನೀಡಿದ ಉತ್ತರವನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.

ಉತ್ತರದಲ್ಲಿ ಏನಿದೆ?
ನಾನು ಆಗಸ್ಟ್ 31ರಂದು ಜ್ಯೋತಿಷ್ಯರನ್ನು ಭೇಟಿಯಾಗಿದ್ದೆ. ಅವರು ಸೆಪ್ಟೆಂಬರ್ 1ರಂದು ರಾಹುಕಾಲ ಇರುವುದರಿಂದ ಬಸ್ ಅನ್ನು 6.15 ಕ್ಕೆ ಚಲಾಯಿಸಬೇಡಿ. ಅಲ್ಲದೇ ಬಸ್ ಚಲಾಯಿಸಿದರೆ 15 ಜೀವ ಹೋಗುತ್ತೆ ಅಂತಾ ಹೇಳಿದರು. ಹಾಗಾಗಿ ನಾನು ಜನರ ಜೀವ ಉಳಿಸಲು ಒಂದು ಗಂಟೆ ತಡವಾಗಿ ಬಸ್ ಚಾಲನೆ ಮಾಡಿದೆ. ಜನರ ಜೀವ ಉಳಿಸಲು ನಾ ಮಾಡಿದ್ದು ತಪ್ಪೇ ಎಂದು ಯೋಗೇಶ್ ಅಧಿಕಾರಿಯನ್ನೇ ಪ್ರಶ್ನೆ ಮಾಡಿದ್ದಾರೆ.

ಯೋಗೇಶ್ ಅವರ ಈ ಉತ್ತರ ನೋಡಿ ಅಧಿಕಾರಿಗಳು ನೋಡಿ ಬೇಸ್ತು ಬಿದ್ದಿದ್ದಾರೆ. ಕನಕ ಜಯಂತಿ, ಹೋಮ ಹವನ ಮಾಡುವಾಗ ಜ್ಯೋತಿಷಿಗಳ ಬಳಿ ಸಮಯ ಕೇಳಲ್ವೇ ಇದು ಹಾಗೆ ಎಂದು ಪ್ರ್ರಶ್ನಿಸಿದ್ದಾರೆ. ಅಲ್ಲದೇ ಮಹಾಲಯ ಅಮಾವಾಸ್ಯೆ ಹತ್ತಿರ ಇದುದ್ದರಿಂದ ಜ್ಯೋತಿಷ್ಯರ ಬಳಿ ಸಲಹೆ ಕೇಳಿದೆ ಎಂದು ಚಾಲಕ ಯೋಗೇಶ್ ತನ್ನ ಕೆಲಸಕ್ಕೆ ಸಮರ್ಥನೆ ನೀಡಿದ್ದಾರೆ.

ಚಾಲಕನ ಪ್ರಶ್ನೆಗೆ ಅಧಿಕಾರಿಗಳು ಸುಸ್ತು:
ತನ್ನ ತಪ್ಪನ್ನು ಪ್ರಶ್ನಿಸಿದವರಿಗೆ ಸರಣಿ ಪ್ರಶ್ನೆಗಳನ್ನು ಯೋಗೀಶ್ ಕೇಳುತ್ತಾರೆ. ಬೆಳಗ್ಗೆ ನಾನು ಸಂಚರಿಸುವ ರಸ್ತೆಯಲ್ಲಿ ಇಷ್ಟೇ ಪ್ರಮಾಣದ ಆದಾಯ ಬರುತ್ತದೆ ಎಂದು ಹೇಗೆ ಲೆಕ್ಕ ಹಾಕುತ್ತೀರಿ? ಈ ರೀತಿಯ ಲೆಕ್ಕಾಚಾರಕ್ಕೆ ನೀವು ಬಳಸಿದ ವೈಜ್ಞಾನಿಕ ಮಾನದಂಡ ಯಾವುದು? ಒಂದು ವೇಳೆ ಪಾಸ್ ಹೊಂದಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದರೆ ನೀವು ನೀಡಿದ ಟಾರ್ಗೆಟ್ ತಲುಪುವುದು ಹೇಗೆ ಎಂದು ಪ್ರಶ್ನೆ ಕೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *