ಪ್ರೇಯಸಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿ!

ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.

ರಾಜು ದೊಡಮನಿ ತನ್ನ ಪ್ರೇಯಸಿ ಸುರೇಖಾ ಮಹಾಂತೇಶ್ ಐಹೊಳೆ(30)ಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುರೇಖಾ ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಕೂಡ ರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ರಾಜು ಹಾಗೂ ಸುರೇಖಾ ನಡುವೆ ಜಗಳ ಆಗಿದೆ. ಹಾಗಾಗಿ ರಾಜು, ಸುರೇಖಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಶುಕ್ರವಾರ ತಡರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಇದರಿಂದ ಕೋಪಗೊಂಡ ರಾಜು ತನ್ನ ಪ್ರೇಯಸಿ ಸುರೇಖಾಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕೂಡಲೇ ಸುರೇಖಾ ಪೋಷಕರು ಆಕೆಯನ್ನು ಮಹರಾಷ್ಟ್ರದ ಮೀರಜ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಖಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ರಾಜು ಕೊಲೆ ಮಾಡಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರೇಖಾ ಮದುವೆ ಆಗಿ ತನ್ನ ಪತಿಯನ್ನು ಬಿಟ್ಟು ರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೆ ಸುರೇಖಾಗೆ 6 ಹಾಗೂ 8 ವರ್ಷದ ಹೆಣ್ಣು ಮಕ್ಕಳು ಇದ್ದಾರೆ.

ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *