ರೀಪಿಸ್ ಪಟ್ಟಿಯಿಂದ ಹಲ್ಲೆಗೈದು ಪತ್ನಿಯನ್ನ ಬರ್ಬರವಾಗಿ ಕೊಂದ!

ಚಾಮರಾಜನಗರ: ವರದಕ್ಷಿಣೆಗಾಗಿ ಹೆಂಡತಿಯನ್ನು ಗಂಡ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತಳ್ಳಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಮಂಜು ಎಂಬಾತ ತನ್ನ ಪತ್ನಿ ಚಿನ್ನತಾಯಮ್ಮಳನ್ನು ವರದಕ್ಷಿಣೆಗಾಗಿ ಪೀಡಿಸಿ ಕೊಲೆಗೈದಿದ್ದಾನೆ. ರಾತ್ರಿ ಕುಡಿದ ಅಮಲಿನಲ್ಲಿ ಮಂಜು ಚಿನ್ನತಾಯಮ್ಮನನ್ನು ವರದಕ್ಷಿಣೆ ತರುವಂತೆ ಪೀಡಿಸಿ ರೀಪಿಸ್ ಪಟ್ಟಿಯಿಂದ ಹಲ್ಲೆಗೈದಿದ್ದಾನೆ. ಈ ಸಂದರ್ಭದಲ್ಲಿ ಬಲವಾದ ಏಟುಗಳು ಚಿನ್ನತಾಯಮ್ಮಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮದುವೆಯಾಗಿ 16 ವರ್ಷಗಳು ಕಳೆದರೂ ಸಹ ಮಂಜುಗೆ ವರದಕ್ಷಿಣೆ ಆಸೆ ಮಾತ್ರ ತೀರಿರಲಿಲ್ಲ. ಮದುವೆಯಾದಾಗ ಚಿನ್ನತಾಯಮ್ಮ ಅವರ ತಂದೆ-ತಾಯಿ ವರದಕ್ಷಿಣೆ ನೀಡಿದ್ದಾರೆ. ಇದಲ್ಲದೇ ಆಗಾಗ ವರದಕ್ಷಿಣೆ ತರುವಂತೆ ಹೆಂಡತಿಯನ್ನು ಮಂಜು ತವರು ಮನೆಗೆ ಕಳುಹಿಸಿದ ಸಂದರ್ಭದಲ್ಲೂ ಕೂಡ ಸಾಕಷ್ಟು ಹಣವನ್ನು ನೀಡಲಾಗಿದೆ.

ಚಿನ್ನತಾಯಮ್ಮ ಅವರ ತಂದೆ ತಾಯಿ ಸಾವನ್ನಪ್ಪಿದ ನಂತರವೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಂಜು ಪೀಡಿಸುತ್ತಿದ್ದ. ಇದೇ ರೀತಿ ರಾತ್ರಿ ಕುಡಿದ ಅಮಲಿನಲ್ಲಿ ಬಂದು ಚಿನ್ನತಾಯಮ್ಮ ಮೇಲೆ ರೀಪಿಸ್ ಪಟ್ಟಿಯಿಂದ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಆಕೆ ಸಾವನ್ನಪ್ಪಿದ್ದಾರೆ.

ಸದ್ಯ ಆರೋಪಿ ಮಂಜುನನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *