3ನೇ ಪತ್ನಿಗಾಗಿ 2ನೇ ಹೆಂಡ್ತಿಯನ್ನ ಕೊಲೆಗೈದ

ಯಾದಗಿರಿ: ಚಪಲ ಚನ್ನಿಗರಾಯ ತನ್ನ ಚಪಲತೆ ತೀರಿಸಿಕೊಳ್ಳಲು ಮೂರು ಮದುವೆಯಾಗಿ, ತನ್ನ ಮೂರನೇ ಹೆಂಡತಿಗಾಗಿ ಎರಡನೇ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಅಲ್ಲಿಪುರದೊಡ್ಡ ತಾಂಡಾದಲ್ಲಿ ನಡೆದಿದೆ.

ತಾಂಡಾದ ನಿವಾಸಿ ವಿನಾಯಕ ರಾಠೋಡ ತನ್ನ ಮೂರನೇ ಪತ್ನಿ ಚಾಂಗಿಬಾಯಿ ಜೊತೆ ಸೇರಿ ಎರಡನೇ ಪತ್ನಿ ಅನೀತಾಳನ್ನು ಬರ್ಬರವಾಗಿ ಕೊಲೆ ಮಾಡಿ ಕನಗನಹಳ್ಳಿ ಗ್ರಾಮದ ಹತ್ತಿರವಿರುವ ಭೀಮಾನದಿಯಲ್ಲಿ ಶವವನ್ನು ಬಿಸಾಕಿದ್ದಾನೆ. ಅಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ವಿನಾಯಕ ಮೂರು ಮದುವೆಯಾಗಿದ್ದ. ಮೊದಲನೇ ಹೆಂಡತಿ ಪ್ರೇಮಬಾಯಿ ಈತನಿಂದ ದೂರವಾಗಿ ಬೆರೆ ವ್ಯಕ್ತಿ ಜೊತೆ ವಿವಾಹವಾಗಿದ್ದಾಳೆ. ನಂತರ ವಿನಾಯಕ ತನ್ನ ಸಂಬಂಧಿಕರ ಹುಡುಗಿ ಅನೀತಾಳನ್ನು ಪ್ರೀತಿ ಮಾಡಿ ಪ್ರೇಮ ವಿವಾಹವಾಗಿದ್ದ. ಆದ್ರೆ ಅನೀತಾಳೊಂದಿಗೆ ಸುಖ ಸಂಸಾರ ನಡೆಸುವುದು ಬಿಟ್ಟು ಮತ್ತೆ ತನ್ನ ಚಪಲತೆ ತೀರಿಸಿಕೊಳ್ಳಲು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಯಾಗಾಪುರ ತಾಂಡಾದ ನಿವಾಸಿ ಚಾಂಗಿಬಾಯಿ ಜೊತೆ ಪ್ರೇಮ ವಿವಾಹವಾಗಿದ್ದಾನೆ.

ಇಬ್ಬರೂ ಹೆಂಡತಿಯರು ಒಂದಡೆ ಇದ್ರೆ ಜಗಳವಾಗುತ್ತದೆ ಎಂದು ಅರಿತು ಎರಡನೇ ಪತ್ನಿ ಅನೀತಾಳನ್ನು ಊರಲ್ಲಿ ಇಟ್ಟುಕೊಂಡು ಮೂರನೇ ಹೆಂಡತಿ ಚಾಂಗಿಬಾಯಿಯನ್ನು ಯಾದಗಿರಿಯ ಧಾರುನಾಯಕ ತಾಂಡಾದಲ್ಲಿ ಮನೆ ಮಾಡಿ ಇಟ್ಟಿದ್ದ. ಅಟೋ ಚಾಲನೆ ಮಾಡಿಕೊಂಡು ಇಬ್ಬರು ಪತ್ನಿಯರ ಜೊತೆ ಜೀವನ ಸಾಗಿಸುಕೊಂಡು ಹೋಗುತ್ತಿದ್ದ.

ಮೂರನೇ ಹೆಂಡತಿ ಚಾಂಗಿಬಾಯಿ, ತನ್ನ ಜೊತೆ ಸಂಸಾರ ನಡೆಸು ಎಂದು ಪೀಡಿಸುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ವಿನಾಯಕ ಹಾಗೂ ಮೂರನೇ ಹೆಂಡತಿ ಚಾಂಗಿಬಾಯಿ ಸೇರಿ ಅನಿತಾಳನ್ನು ಮನೆಯಲ್ಲಿ ಕೊಲೆ ಮಾಡಿ ಭೀಮಾನದಿಯಲ್ಲಿ ಶವ ಬಿಸಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಅನಿತಾಗೆ ಇಬ್ಬರು ಮಕ್ಕಳಿದ್ದು, ಈಗ ತಾಯಿ ಕೊಲೆಯಾಗಿ ತಂದೆ ಜೈಲುಪಾಲಾಗಿರೋದ್ರಿಂದ ಮಕ್ಕಳು ಅನಾಥವಾಗಿವೆ. ಪ್ರೇಮದ ಬಲೆಗೆ ಬಿದ್ದು ಮದುವೆಯಾಗಿ ಕೊನೆಗೂ ಮೂರನೆಯವಳಿಗಾಗಿ ತನ್ನ 2ನೇ ಪತ್ನಿಯನ್ನೆ ಕೊಲೆ ಮಾಡಿದ ಪತಿರಾಯ ವಿನಾಯಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಯಾದಗಿರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *