ಪತ್ನಿ, ನಾದಿನಿ ಜೊತೆ ಮೂವರು ಮಕ್ಕಳೂ ಸೇರಿ ಐವರನ್ನು ಕೊಚ್ಚಿ ಕೊಂದ!

– ಕೊಲೆ ಮಾಡಿ ಪೊಲೀಸರಿಗೆ ಶರಣಾದ ರಾಕ್ಷಸ!

– ಬಳ್ಳಾರಿಯ ಚಪ್ಪರದಳ್ಳಿಯಲ್ಲಿ ಭೀಕರ ಹತ್ಯಾಕಾಂಡ

ಬಳ್ಳಾರಿ: ಪಾಪಿ ಪತಿಯೊಬ್ಬ ಹೆಂಡತಿ ಮತ್ತು ಹೆಂಡತಿ ತಂಗಿ, ತನ್ನ ಮೂವರು ಮಕ್ಕಳೂ ಸೇರಿ ಒಟ್ಟಾರೆ 5 ಮಂದಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಹತ್ಯಾಕಾಂಡ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ಚಪ್ಪರದಳ್ಳಿಯಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುತಿದ್ದ ತಿಪ್ಪಯ್ಯ ಎನ್ನುವ ವ್ಯಕ್ತಿ ತನ್ನ ಪತ್ನಿ ಪಕ್ಕೀರಮ್ಮ (36), ಪತ್ನಿ ತಂಗಿ ಗಂಗಮ್ಮ(30), ಮಕ್ಕಳಾದ ಪವಿತ್ರ (6), ಮಗ ರಾಜು(8), ಬಸಮ್ಮ (10) ಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಈತನ ಇನ್ನೋರ್ವ ಪುತ್ರಿ 12 ವರ್ಷದ ರಾಜೇಶ್ವರಿ ಬೇರೆ ಊರಿನಲ್ಲಿದ್ದಿದ್ದರಿಂದ ಬದುಕಿದ್ದಾಳೆ. ಕೌಟುಂಬಿಕ ಕಲಹವೇ ಈ ಹತ್ಯಾಕಾಂಡಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ತನ್ನವರನ್ನೆಲ್ಲಾ ಕೊಂದ ಬಳಿಕ ಕೆಂಚನಗುಡ್ಡದ ತಿಪ್ಪಯ್ಯ ಕಂಪ್ಲಿ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಐವರು ಒಂದೇ ಮನೆಯ ಒಂದೇ ಕೊಠಡಿಯಲ್ಲಿ ಕೊಲೆಯಾದ ಪರಿಣಾಮ ಮನೆ ತುಂಬೆಲ್ಲಾ ರಕ್ತ ಮಡುಗಟ್ಟಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *