ಚಿಲ್ಲರೆ ಕಾಸಿಗೆ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಆತ್ಮೀಯ ಗೆಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಪ್ರತಾಪ್ ಹಾಗೂ ಶ್ರೀನಿವಾಸ್ ಆತ್ಮೀಯ ಗೆಳೆಯರು. ಪ್ರತಾಪ್ ಹಾಗೂ ಶ್ರೀನಿವಾಸ್ ಇಬ್ಬರು ವಿದ್ಯಾರಣ್ಯಪುರದ ರಾಮಚಂದ್ರಪುರ ನಿವಾಸಿಗಳು. ಕಳೆದ ಹತ್ತು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರು ಸಂಜೆಯಾದರೆ ಜೊತೆಯಾಗಿ ಬಾರ್ ಗೆ ಹೋಗುತ್ತಿದ್ದರು. ಎಂದಿನಂತೆ ಶ್ರೀನಿವಾಸ್ ಹಾಗೂ ಪ್ರತಾಪ್ ಇಬ್ಬರು ಮಂಗಳವಾರ ಸಂಜೆ ಕಂಠಪೂರ್ತಿ ಕುಡಿದಿದ್ದಾರೆ.

ಶ್ರೀನಿವಾಸ್ ಹಾಗೂ ಪ್ರತಾಪ್‍ಗೆ ಮದ್ಯ ತರುವುದಕ್ಕೆ ಹಣ ಕೊಟ್ಟಿರುತ್ತಾನೆ. ಕುಡಿದ ಬಳಿಕ ಶ್ರೀನಿವಾಸ್, ಪ್ರತಾಪ್ ಬಳಿ ಚಿಲ್ಲರೆ ಕಾಸು ಕೇಳಿದ್ದಾನೆ. ಚಿಲ್ಲರೆ ಕಾಸಿಗಾಗಿ ಆರಂಭವಾದ ಗಲಾಟೆಯಲ್ಲಿ ಶ್ರೀನಿವಾಸ್, ಪ್ರತಾಪ್ ನ ಮೂಗಿಗೆ ಒಂದೇ ಒಂದು ಪಂಚ್ ಕೊಟ್ಟಿದ್ದಾನೆ. ಕೊಟ್ಟ ಒಂದೇ ಪಂಚ್‍ಗೆ ಪ್ರತಾಪ್ ನೆಲಕ್ಕೆ ಬಿದ್ದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಪ್ರತಾಪ್ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ಮೃತನಾಗಿರುವ ಪ್ರತಾಪ್ ಈ ಹಿಂದಿನಿಂದಲೂ ಹಿಮೋಫೀಲಿಯಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದನು. ಈ ಕಾಯಿಲೆಯಿಂದ ಬಳಲುತ್ತಿರುವರಿಗೆ ಸಣ್ಣ ಗಾಯಗಳಾದರೂ ರಕ್ತಸ್ರಾವ ಹೆಚ್ಚಾಗುತ್ತಂತೆ. ಸದ್ಯ ಕುಟುಂಬದವರು ನೀಡಿರುವ ದೂರಿನ ಮೇರೆಗೆ ಆರೋಪಿ ಶ್ರೀನಿವಾಸ್ ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *