ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲವೆಂದು ಹೆಂಡ್ತಿಯನ್ನ ಮನೆಯಿಂದ ಹೊರಗಟ್ಟಿದ!

ಹೈದರಾಬಾದ್: ಬಿರಿಯಾನಿ ಚೆನ್ನಾಗಿ ಮಾಡಲಿಲ್ಲವೆಂಬ ಕಾರಣಕ್ಕೆ ಪತಿ ತನ್ನನ್ನು ಮೆನಯಿಂದ ಹೊರಗಟ್ಟಿದ್ದಾರೆಂದು ಮಹಿಳೆಯೊಬ್ಬರು ಪೊಲೀಸರ ಮೊರೆ ಹೋದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಶುಕ್ರವಾರದಂದು ನಡೆದಿದೆ.

ದೂರಿನ ಪ್ರಕಾರ ಪತಿ ಇದೇ ಕಾರಣಕ್ಕೆ ಮಹಿಳೆಯನ್ನು ಮನೆಯಿಂದ ಹೊರಹಾಕಿರುವುದು ಎರಡನೇ ಬಾರಿ. ಆರೋಪಿ ಪತಿ ರಾಜೇಂದ್ರ ಪ್ರಸಾದ್ ಕಂಪ್ಯೂಟರ್ ಎಂಜಿನಿಯರ್. ಮನೆಯಿಂದ ಹೊರಹಾಕಲ್ಪಟ್ಟ 25 ವರ್ಷದ ಪತ್ನಿ ಮಾನಸಾ ವಾರ್ದನ್ನೆಪೇಟೆಯ ಇಳ್ಳಾಂದ ಗ್ರಾಮದಲ್ಲಿ ಪತಿ ಮನೆ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ಮತ್ತೆ ತನ್ನನ್ನು ಮನೆಗೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪತಿ ರಾಜೇಂದ್ರ ಕುಡುಕನಾಗಿದ್ದು, ಯಾವಾಗ್ಲೂ ಬಿರಿಯಾನಿ ಮಾಡುವಂತೆ ಕೇಳುತ್ತಿದ್ದರು. ತನಗೆ ಚೆನ್ನಾಗಿ ಅಡುಗೆ ಮಾಡಲು ಬರದ ಕಾರಣ ಇದೇ ವಿಷಯವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಾನಸಾ ಆರೋಪಿಸಿದ್ದಾರೆ. ರಾಜೇಂದ್ರನ ಕುಟುಂಬದವರು ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡಿದ್ದರು ಎಂದು ಕೂಡ ಮಾನಸಾ ಆರೋಪ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್‍ನಲ್ಲಿ ಮಾನಸಾಗೆ ರಾಜೇಂದ್ರ ಜೊತೆ ಮದುವೆಯಾಗಿತ್ತು. ಆಕೆಯನ್ನು ಜನವರಿಯಲ್ಲಿ ಮೊದಲ ಬಾರಿಗೆ ಮನೆಯಿಂದ ಹೊರಹಾಕಿದ್ದ. ನಂತರ ಜೂನ್‍ನಲ್ಲಿ ಹಿರಿಯರು ಮಧ್ಯಪ್ರವೇಶಿಸಿ ಇಬ್ಬರಿಗೂ ರಾಜಿ ಮಾಡಿಸಿದ್ದರು. ಆದ್ರೆ ಶುಕ್ರವಾರದಂದು ಮತ್ತೆ ಕುಡಿದು ಬಂದ ರಾಜೇಂದ್ರ ಹೆಂಡತಿಗೆ ಬಿರಿಯಾನಿ ಮಾಡುವಂತೆ ಕೇಳಿದ್ದ. ಆದ್ರೆ ಬಿರಿಯಾನಿಯನ್ನ ರುಚಿಯಾಗಿ ಮಾಡಿಲ್ಲವೆಂದು ತನ್ನನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾಗಿ ಮಾನಸಾ ಹೇಳಿದ್ದಾರೆ.

ಸ್ಥಳೀಯ ಮಹಿಳಾ ಹೋರಾಟಗಾರರು ಮಾನಸಾ ಬೆಂಬಲಕ್ಕೆ ಬಂದಿದ್ದು, ಅಧಿಕೃತವಾಗಿ ದೂರು ದಾಖಲಿಸಿಸಲು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಿದ ನಂತರ ಪೊಲೀಸರು, ಮಾನಸಾ ಪತಿ ಹಾಗೂ ಅತ್ತೆ ಮನೆಯವರೊಂದಿಗೆ ಕೌನ್ಸೆಲಿಂಗ್ ಮಾಡಲು ಪ್ರಯತ್ನಿಸಿದ್ದಾರೆ.

ರಾಜೇಂದ್ರ ಹಾಗೂ ಆತನ ಮನೆಯವರು ಮಾನಸಾಗೆ ಕಿರುಕುಳ ನೀಡೋದು ಮುಂದುವರಿಸಿದ್ರೆ, ಅವರ ವಿರುದ್ಧ ಕೇಸ್ ದಾಖಲಿಸೋದಾಗಿ ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *