ಬೈಕಿಗೆ ಅಪರಿಚಿತ ವಾಹನ ಡಿಕ್ಕಿ – ಚರಂಡಿಯಲ್ಲೇ ನರಳಾಡಿ ಓರ್ವ ಸಾವು, ಮತ್ತೋರ್ವ ಗಂಭೀರ

ತುಮಕೂರು: ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಟೆಗಟ್ಟಲೆ ರಸ್ತೆ ಬದಿಯ ಚರಂಡಿಯಲ್ಲೇ ನರಳಾಡಿ ಓರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನ ತಿಮ್ಮರಾಯನಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ (32) ಮೃತ ದುರ್ದೈವಿ. ಅಪಘಾತದಲ್ಲಿ ಯಾರ ನೆರವೂ ಇಲ್ಲದ ಪರಿಣಾಮ ಸವಾರ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಕೆ.ಆರ್.ಪುರದ ನಿವಾಸಿಗಳಾದ ಮಂಜುನಾಥ್ (32) ಹಾಗೂ ಚಂದ್ರ (30) ಬೆಳಗ್ಗೆ ನಸುಕಿನ ಜಾವ ಸುಮಾರು 3.30ಕ್ಕೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 48 ರಸ್ತೆ ತಿಮ್ಮರಾಜನ ಹಳ್ಳಿಯ ಬಳಿ ಬೆಳಗ್ಗಿನ ಜಾವ ಸುಮಾರು 5.30ರಲ್ಲಿ ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ರಸ್ತೆಯ ಪಕ್ಕ ಚರಂಡಿಗೆ ಬಿದ್ದಿದ್ದಾರೆ.

ಬಿದ್ದ ರಭಸಕ್ಕೆ ಇಬ್ಬರಿಗೂ ಗಾಯಗಳಾಗಿದ್ದು ನರಳಾಡಿದ್ದಾರೆ. ಆದರೆ ಬೆಳಗ್ಗಿನ ಜಾವ ಆಗಿರುವುದರಿಂದ ಜನ ಸಂಚಾರ ಕಡಿಮೆ ಇತ್ತು. ಹೀಗಾಗಿ ಸಹಾಯ ಮಾಡುವವರು ಯಾರೂ ಇರಲಿಲ್ಲ. ಪರಿಣಾಮ ಬೈಕ್ ಓಡಿಸುತ್ತಿದ್ದ ಮಂಜುನಾಥ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಚಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಬೆಳಗ್ಗೆ ಸುಮಾರು 7.00 ಗಂಟೆ ಸಮಯದಲ್ಲಿ ದಾರಿ ಹೋಕರು ನೋಡಿದ್ದು, ತಕ್ಷಣ ಕೋರಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದ ಕೋರಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗಾಯಾಳು ಚಂದ್ರನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *