ಬಣವೆಗೆ ಬಿದ್ದ ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಾವು

ರಾಮನಗರ: ರಾಗಿ ಬಣವೆಗೆ ಬಿದ್ದ ಬೆಂಕಿಯನ್ನ ನಂದಿಸಲು ಹೋದ ವ್ಯಕ್ತಿ ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೋಡಿಯಾಲ ಗ್ರಾಮದಲ್ಲಿ ನಡೆದಿದೆ.

ಕೋಡಿಯಾಲ ಗ್ರಾಮದ ಕೆಂಪಯ್ಯ ಮೃತ ದುರ್ದೈವಿ. ಲಕ್ಷ್ಮಿ ನಾರಾಯಣ ಎಂಬವರು ಒಂದೂವರೆ ಎಕರೆಯಲ್ಲಿ ರಾಗಿ ಬೆಳೆದಿದ್ದರು. ರಾಗಿಯನ್ನ ಒಕ್ಕಣೆ ಮಾಡಲು ಮುಂದಾಗಿದ್ದ ಲಕ್ಷ್ಮಿ ನಾರಾಯಣ ಮೆದೆ ಹಾಕಿದ್ದರು.

ಬುಧವಾರ ಮಧ್ಯಾಹ್ನದ ವೇಳೆ ಲಕ್ಷ್ಮೀನಾರಾಯಣ ಅವರ ಮೆದೆಗೆ ಬೆಂಕಿ ಬಿದ್ದಿತ್ತು. ಈ ವೇಳೆ ಜಮೀನಿನ ಕಡೆ ಹೋಗಿದ್ದ ಕೆಂಪಯ್ಯ, ಬೆಂಕಿ ಕಂಡು ನಂದಿಸಲು ಮುಂದಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆಯ ನಡುವೆ ಸಿಲುಕಿದ ಕೆಂಪಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಎರಡು ರಾಗಿ ಮೆದೆಗಳು ಭಸ್ಮವಾಗಿವೆ. ಈ ಸಂಬಂಧ ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *