ಕುಡಿದ ಮತ್ತಿನಲ್ಲಿ ಎಸಗಿದ್ದ ಭಯಾನಕ ತಪ್ಪಿಗೆ ಆತ್ಮಹತ್ಯೆಗೆ ಶರಣಾದ ತಂದೆ

ಜೈಪುರ: ತಂದೆಯೊಬ್ಬ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿ, ಒಂದು ವಾರದ ಬಳಿಕ ಶಿಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಉದಯ್‍ಪುರದಲ್ಲಿ ನಡೆದಿದೆ.

ಮೃತ ವ್ಯಕ್ತಿ ಪ್ರತಾಪಗಡ್ ಜಿಲ್ಲೆಯ ಧರಿಯಾವಾಡ್ ಬ್ಲಾಕ್‍ನ ಸಿಹಾದ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಕಟ್ಟಿಗೆ ತರಲೆಂದು ಮಗಳನ್ನು ಕಾಡಿಗೆ ಕರೆದುಕೊಂಡು ಹೋಗಿದ್ದನು. ಕಾಡಿಗೆ ಹೋಗುವ ಮೊದಲೇ ಅತಿಯಾಗಿ ಕುಡಿದಿದ್ದು, ಬೆದರಿಕೆವೊಡ್ಡಿ ಮಗಳನ್ನೇ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಾಯಿಯ ಬಳಿ ಹೇಳಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ತಾಯಿ ಈ ಬಗ್ಗೆ ಪತಿಯನ್ನು ಕೇಳಿದಾಗ ಆಕೆಗೂ ಬೆದರಿಕೆವೊಡ್ಡಿದ್ದು, ಮನೆಯಲ್ಲಿಯೇ ಇರುವಂತೆ ಕೂಡಿ ಹಾಕಿದ್ದಾನೆ. ನಂತರ ಮಹಿಳೆ ಮನೆಯಿಂದ ತಪ್ಪಿಸಿಕೊಂಡು ತನ್ನ ಸಹೋದರನ ಮನೆಗೆ ಹೋಗಿದ್ದಾರೆ. ಅಲ್ಲಿ ಪತಿಯ ಕೃತ್ಯದ ಬಗ್ಗೆ ತಿಳಿಸಿದ್ದು, ತಕ್ಷಣ ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಸದ್ಯಕ್ಕೆ ನಾವು ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತ ಆರೋಪಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆತನಿಗೆ ಎರಡು ದಿನಗಳಿಂದ ಪೊಲೀಸರು ಹುಡುಕಾಟ ಮಾಡುತ್ತಿದ್ದರು. ಆರೋಪಿ ಎರಡು ದಿನಗಳ ನಂತರ ತನ್ನ ಮನೆಗೆ ಹಿಂದಿರುಗಿ ಬಂದಿದ್ದಾನೆ. ಆದರೆ ಪೊಲೀಸರು ಬಂಧಿಸಲು ಹೋಗುವ ಮೊದಲೇ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಇನ್ಸ್ ಪೆಕ್ಟರ್ ಭವಾನಿ ಸಿಂಗ್ ಹೇಳಿದ್ದಾರೆ.

ಮೃತ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ ಬಳಿಕ ತಲೆಮರೆಸಿಕೊಂಡಿದ್ದನು. ಪೊಲೀಸರು ಮನೆಯೊಳಗೆ ಹೋದಾಗ ಆರೋಪಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಹುಶಃ ಅಪರಾಧ ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಡಿವೈಎಸ್‍ಪಿ ಸುರೇಂದ್ರ ಕುಮಾವತ್ ಶಂಕೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *