`ಕೈ’ ಶಾಸಕರ ಚೇಲಾಗಳ ಗೂಂಡಾಗಿರಿ- ಸಮಾವೇಶಕ್ಕೆ ಜಾಗ ಕೊಡ್ಲಿಲ್ಲವೆಂದು ಕಾಂಪೌಂಡ್ ಒಡೆದು ವ್ಯಕ್ತಿ ಮೇಲೆ ಹಲ್ಲೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಚೇಲಾಗಳ ಗೂಂಡಾಗಿರಿ ಮುಂದುವರಿದಿದ್ದು, ಇದೀಗ ಯಶವಂತಪುರ ಶಾಸಕ ಎಸ್‍ಟಿ ಸೋಮಶೇಖರ್ ಚೇಲಾಗಳು ಜಮೀನು ಮಾಲೀಕ ಪುಟ್ಟರಾಜು ಎಂಬವರಿಗೆ ಧಮ್ಕಿ ಹಾಕಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ತಿಗಳರಪಾಳ್ಯದಲ್ಲಿ ಇದೇ ಭಾನುವಾರ ಮನೆ-ಮನೆಗೆ ಕಾಂಗ್ರೆಸ್ ಸಮಾವೇಶಕ್ಕೆ ಜಾಗ ನೀಡುವಂತೆ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದರು. ಆದ್ರೆ ಪುಟ್ಟರಾಜು ಅವರು 4 ಎಕರೆ ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿದ್ದ ಕಾರಣ ಜಮೀನು ಕೊಡಲ್ಲ ಎಂದಿದ್ದರು. ಇದರಿಂದ ಸಿಟ್ಟುಗೊಂಡ ಶಾಸಕರ ಚೇಲಾಗಳು ಶನಿವಾರ ಖಾಲಿ ಜಾಗಕ್ಕೆ ಹಾಕಿದ್ದ ಕಾಂಪೌಂಡ್ ಒಡೆದು ಹಾಕಿದ್ದಾರೆ. ಅಲ್ಲದೇ ಅಂದೇ ರಾತ್ರಿ ಖಾಲಿ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಎಂಬವರು ಸೇರಿದಂತೆ ನಾಲ್ವರ ಮೇಲೆ ಎರಗಿ, ಪ್ರಕಾಶ್‍ನನ್ನು ರಸ್ತೆ ತುಂಬೆಲ್ಲಾ ಅಟ್ಟಾಡಿಸಿ ಹೊಡೆದಿದ್ದಾರೆ. ಎದೆಗೆ ಕಲ್ಲಿನಿಂದ ಜಜ್ಜಿ, ತೊಡೆಗೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಯಶವಂತಪುರ ಶಾಸಕ ಎಸ್‍ಟಿ ಸೋಮಶೇಖರ್

ಈ ಕುರಿತು ಹಲ್ಲೆಗೊಳಗಾದ ಪ್ರಕಾಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಮಾವೇಶ ಮಾಡಲು ಜಾಗ ಕೊಡಲ್ಲ ಎಂದಿದ್ದಕ್ಕೆ ಸಿಟ್ಟುಗೊಂಡ ಶಾಸಕ ಸೋಮಶೇಖರ್ ಅವರ ಸುಮಾರು 25-30 ಬೆಂಬಲಿಗರು ಮಚ್ಚು, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನನ್ನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಕೂಡಲೇ ನಾನು ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹೊರತು ಈ ಕುರಿತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಹೇಳಿದ್ದಾರೆ.

ಪ್ರಕಾಶ್ ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ, ಅದೇನ್ ಮಾಡ್ಕೋತ್ತಿರೋ ಮಾಡ್ಕೊಳ್ಳಿ ಅಂತ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *